ಕಾರವಾರ:- ಲಕ್ಷಾಂತರ ಭಕ್ತರು ಮಾಲಾಧಾರಿಯಾಗಿ ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ.ಆದ್ರೆ ಬೀದಿನಾಯಿಯೊಂದು ಶಬರಿಮಲೆಯ ಅಯ್ಯಪ್ಪನ ದರ್ಶನಕ್ಕೆ 200 ಕಿಲೋಮೀಟರ್ ದೂರದಿಂದ ಗುರುಸ್ವಾಮಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಅಯ್ಯಪ್ಪನ ದರ್ಶನಕ್ಕೆ ಹೊರಟಿದೆ. ಎಲ್ಲಿ ಅಂತೀರಾ ಈ ಸುದ್ದಿ ಓದಿ.
ಕುತ್ತಿಗೆಗೆ ಮಾಲೆಹಾಕಿ ಕಪ್ಪು ಬಟ್ಟೆ ಕಟ್ಟಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಗುರು ಸ್ವಾಮಿಗಳೊಂದಿಗೆ ರಸ್ತೆಯಲ್ಲಿ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿರುವ ಶ್ವಾನ. ಅರೇ ಇದೇನಪ್ಪ ಚಾರ್ಲಿ ಸಿನಿಮಾ ಬೆನಪಿಸುವಂತೆ ಯಾರೋ ಸಾಕಿ ಕರೆದುಕೊಂಡು ಹೋಗುತಿದ್ದಾರೆಯೇ ಎಂದು ನೋಡಿದಾಕ್ಷಣ ಅನುಸಬಹುದು. ಇಲ್ಲ. ಈ ಶ್ವಾನ ಯಾರೂ ಸಾಕಿದ್ದಲ್ಲ. ಬೀದಿಯಲ್ಲಿ ಬಿದ್ದ ಆಹಾರ ಸೇವಿಸಿಕೊಂಡು ಕಂಡಲ್ಲಿ ಇರುವ ಈ ಬೀದಿ ನಾಯಿ ಇದೀಗ ಗುರುಸ್ವಾಮಿಗಳೊಂದಿಗೆ ಮಾಲೆ ಧರಿಸಿ ಶಬರಿ ಮಲೆಗೆ ಹೊರಟು ನಿಂತಿದೆ.
ಹೌದು ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಗ್ರಾಮದಲ್ಲಿ ಇದ್ದ ಈ ಶ್ವಾನ, ಇದೇ ಗ್ರಾಮದ ನಾಗನಗೌಡ ಪಾಟೀಲ್,ಮಂಜುಸ್ವಾಮಿ ಎಂಬುವವರು ತಮ್ಮ ಮೂರು ಜನ ತಂಡದೊಂದಿಗೆ ಮಾಲೆ ಧರಿಸಿ ಕೇರಳದ ಶಬರಿಮಲೆಗೆ ಪಾದಯಾತ್ರೆ ಮೂಲಕ ದರ್ಶನಕ್ಕೆ ಹೊರಟಿದ್ದರು. ಇವರೊಂದಿಂಗೆ ಈ ಬೀದಿ ನಾಯಿಯು ಸಹ ಹಿಂಬಾಲಿಸಿದೆ. ಆದ್ರೆ ಒಂದಷ್ಟು ದೂರ ಬಂದು ಮರಳುತ್ತೆ ಎಂದು ಅಂದುಕೊಂಡಿದ್ದ ಗುರುಸ್ವಾಮಿಗಳು ತಮ್ಮಷ್ಟಕ್ಕೆ ಪಾದಯಾತ್ರೆ ಪ್ರಾರಂಭಿಸಿದ್ರು.ಆದ್ರೆ ಇವರನ್ನೇ ಹಿಂಬಾಲಿಸಿದ ಈ ಶ್ವಾನ ನೂರಾರು ಕಿಲೋಮೀಟರ್ ಕ್ರಮಿಸಿದರೂ ಇವರ ಸಂಘ ಬಿಡಲಿಲ್ಲ. ದೇವರ ಪೂಜೆ,ವಿಶ್ರಾಂತಿ ಹೀಗೆ ಎಲ್ಲೆಂದರಲ್ಲಿ ಸಾತ್ ನೀಡಿದ ಈ ಶ್ವಾನ ಇವರಿಗೆ ತೊಂದರೆಯಾಗದಂತೆ ರಕ್ಷಣೆ ಮಾಡುತ್ತಾ ಇವರೊಂದಿಗೆ ಸಾಗಿದೆ.
ಇನ್ನು ಇವರೊಂದಿಗೆ ಹಿಂಬಾಲಿಸಿ ಇವರ ರಕ್ಷಣೆ ಮಾಡುತ್ತಾ ಬರುತಿದ್ದ ಈ ಶ್ವಾನದ ಬಗ್ಗೆ ಇವರಿಗೂ ಪ್ರೀತಿ ಹುಟ್ಟಿದೆ. ತಾವು ಪಡೆಯುವ ಪ್ರಸಾದವನ್ನು ಇದಕ್ಕೂ ನೀಡಿ ಅಯ್ಯಪ್ಪನ ಮಾಲೆ ಹಾಕಿ ಶವರಿಮಲೆಗೆ ಈ ಶ್ವಾನದೊಂದಿಗೆ ಪ್ರಯಾಣ ಮುಂದುವರೆಸಿದ್ದು ,ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರ ಹೊನ್ನಾವರದ ಮೂಲಕ ಶಬರಿಮಲೆಗೆ ಹೊರಟಿದ್ದಾರೆ. ಈ ಶ್ವಾನ ತಮ್ಮೊಂದಿಗೆ ಪ್ರಯಾಣ ಬೆಳಸಿದಾಗಿನಿಂದ ನಮಗೆ ತೊಂದರೆಗಳು ಬರಲಿಲ್ಲ,ಎಲ್ಲವೂ ಒಳಿತಾಗಿದೆ. ಈ ಶ್ವಾನಕ್ಕೆ ಶಬರಿಮಲೆಯಲ್ಲಿ ಅಯ್ಯಪ್ಪನ ದರ್ಶನ ಮಾಡಿಸಿ ಅಲ್ಲಿಂದ ವಾಹನದ ಮೂಲಕ ಮರಳಿ ಧಾರವಾಡಕ್ಕೆ ಬಿಡುತ್ತೇವೆ ಎನ್ನುತ್ತಾರೆ ಶ್ವಾನದ ಜೊತೆಯಾದ ಗುರುಸ್ವಾಮಿನಾಗನಗೌಡ ಹಾಗೂ ಮಂಜುಸ್ವಾಮಿ.
ದೇವರಲ್ಲಿ ಭಕ್ತಿ ಕೇವಲ ಮನುಜರಿಗೆ ಮಾತ್ರ ಸೀಮಿತವಲ್ಲ ,ಪ್ರಾಣಿಗಳಿಗೂ ಹೊರತಲ್ಲ ಎಂಬುದು ಶಬರಿ ಮಲೆಗೆ ಹೊರಟ ಈ ಶ್ವಾನವೇ ಸಾಕ್ಷಿಯಾಗಿದೆ.