
ಕಾರವಾರ :- ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಗುರುವಾರ ನಡೆಯುವ ಶಿವರಾತ್ರಿಗೆ ವಿಶೇಷ ವ್ಯವಸ್ಥೆಯನ್ನು ಅಲ್ಲಿನ ಆಡಳಿತ ಮಂಡಳಿ ಕೈಗೊಂಡಿದೆ.
ಕೋವಿಡ್ ಹಿನ್ನಲೆಯಲ್ಲಿ ಆಡಳಿತಮಂಡಳಿಯು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕಿದೆ. ಜೊತೆಗೆ ಕಡ್ಡಾಯವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಯಿದ್ದು ಪುರುಷರು ಕಡ್ಡಾಯವಾಗಿ ಪಂಜೆ,ಶಲ್ಯವನ್ನು ಧರಿಸಬೇಕಿದೆ. ಇನ್ನು ಮಹಿಳೆಯರು ಷಾರ್ಟ, ಟೀ ಶರ್ಟ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.
ದೇವಸ್ಥಾನ ಗರ್ಭಗುಡಿಯು ಮುಂಜಾನೆ 3 ಘಂಟೆಗೆ ತೆರೆಯಲಿದೆ. ಆತ್ಮಲಿಂಗಕ್ಕೆ ವಿಶೇಷ ಪೂಜೆ ನಂತರ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗಳು:-

ನವಧಾನ್ಯ ವಿಶೇಷ ಪೂಜೆ,ಗಣೇಶ ಪೂಜೆ,ಧ್ವಜಾರೋಹಣ, ಮೃತಿಕಾಹರಣೋತ್ಸವ ಭೂತಬಲಿ, ಸ್ಥಾನಶುದ್ಧ್ಯಾದಿ ಹವನಾನುಷ್ಠಾನ ,ಗಜವಾಹನಯಂತ್ರೋತ್ಸವ ಭೂತಬಲಿ, ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ ,ಪುಷ್ಪರಥೋತ್ಸವ ಭೂತಬಲಿ, ಸಿಂಹವಾಹನ ಯಂತ್ರೋತ್ಸವ ,ಪುಷ್ಪರಥೋತ್ಸವ ಭೂತಬಲಿ, ಪುಷ್ಪರತೋತ್ಸವ ಶಿವಯೋಗದ ಮಹಾಪರ್ವ ಮಹಾಕುಂಭಾಭಿಷೇಕ ಪೂರ್ವಕ ಪಂಚಾಮೃತಾಭಿಷೇಕ, ಭೂತಬಲಿ ಜಲಯಾನೋತ್ಸವ , ದೀಪೋತ್ಸವ ,ಮಯೂರ ಯಂತ್ರೋತ್ಸವ ,ಶ್ರೀಮನ್ಮಹಾರಥೋತ್ಸವ, ಮೃಗಯಾತ್ರೆ, ಗ್ರಾಮಬಲಿ ಚೂರ್ಣೋತ್ಸವ, ಅವಭೃಥ, ಜಲಾಯನೋತ್ಸವ, ಮಹಾಪೂರ್ಣಾವತಿ ಅಂಕುರಾರ್ಪಣೆ , ದೀಪೋತ್ಸವ ಅಂಕುರ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದೆ.
ಶಿವರಾತ್ರಿ ವಿಶೇಷ ರಥೋತ್ಸವ.

ಮಹಾರಥೋತ್ಸವವು ದಿನಾಂಕ 14-03-2021ರಂದು ನಡೆಯಲಿದ್ದು ,ಶಿವರಾತ್ರಿ ಅಂಕುರ ಪ್ರಸಾದವು 15-03-2021 ರಂದು ನಡೆಯಲಿದೆ. ಹಾಗೆಯೇ
ದಿನಾಂಕ 19-02-2021 ರಂದು ರಥ ಸಪ್ತಮಿಯಂದು ಮಹಾರಥದ ‘ಗಡ್ಡೆ’ ಹೊರತೆಗೆಯುವ ಕಾರ್ಯಕ್ರಮ ನೆರವೇರಲಿದೆ.
ಈ ಬಾರಿ ಇಳಿಕೆ ಕಂಡ ಶಿವಭಕ್ತರು!
ಪ್ರತಿ ವರ್ಷ ಶಿವರಾತ್ರಿಯ ಹಿಂದಿನ ದಿನದಂದು ಸಾವಿರಾರು ಜನ ಭಕ್ತರು ಗೋಕರ್ಣಕ್ಕೆ ಬಂದು ತಂಗುತ್ತಾರೆ. ಸೂರ್ಯ ಉದಯದ ಸಂದರ್ಭದಲ್ಲಿ ಸಮುದ್ರ ತೀರಕ್ಕೆ ತೆರಳಿ ಗಂಗಾ ಸ್ನಾನ ಮಾಡಿ, ಮರಳಿನ ಮೂಲಕ ವಿಶೇಷ ಶಿವನ ‘ಲಿಂಗ’ ಪೂಜೆ ಮಾಡುವುದು ವಾಡಿಕೆ. ಆದರೇ ಈ ವರ್ಷ ಕರೋನಾ ಮಹಾ ಮಾರಿ ಶಿವಭಕ್ತರನ್ನು ಹೆದರಿಸಿದೆ. ಹೀಗಾಗಿ ಗಿಜಿಗುಡಬೇಕಿದ್ದ ಗೋಕರ್ಣ ಕಾಲಿ ಹೊಡೆಯುತಿದ್ದು ಸ್ಥಳೀಯರು ಮಾತ್ರ ಕಾಣಸಿಗುತಿದ್ದಾರೆ.
ಗೋಕರ್ಣದ ರೆಸಾರ್ಟ ,ವಸತಿ ಗೃಹಗಳು ಪ್ರವಾಸಿಗರು ಹಾಗೂ ಶಿವಭಕ್ತರ ಸಂಖ್ಯೆ ವಿರಳತೆಯಿಂದ ಹಲವುಕಡೆ ಖಾಲಿ ಹೊಡೆಯುತ್ತಿದೆ.
ಸ್ಥಳೀಯರು ಹೇಳುವಂತೆ ಈ ಬಾರಿ ಶಿವರಾತ್ರಿಯ ಹಿಂದಿನ ದಿನವಾಗಿದ್ದರೂ ,ಶಿವದರ್ಶನಕ್ಕೆ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡಿದ್ದು , ಶಿವರಾತ್ರಿ ದಿನವೂ ಕಡಿಮೆ ಆಗಲಿದೆ ಎನ್ನುತಿದ್ದಾರೆ.
ಸ್ಥಳೀಯರಿಗೆ ಪಾಸ್ ವ್ಯವಸ್ಥೆ.
ಗೋಕರ್ಣದಲ್ಲಿ ಸ್ಥಳೀಯ ಪುರೋಹಿತರಿಗೆ ಹಾಗೂ ಗ್ರಾಮಸ್ಥರಿಗೆ ನಿಯಮಿತ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ನಾಳೆ ನಡೆಯುವ ಶಿವರಾತ್ರಿಗೆ ದೇವಸ್ಥಾನದಲ್ಲಿ ವಿಶೇಷ ಪ್ರವೇಶ ಕಲ್ಪಿಸಲಾಗಿದೆ.