ಕಾರವಾರ:- ಮಹಿಳೆಯರಿಗೆ ಧಾರ್ಮಿಕ ಕ್ಷೇತ್ರದಲ್ಲಿ ಕ್ರಿಯಾ ಕರ್ಮಗಳಲ್ಲಿ ಭಾಗಿಯಾಗುವ ಕಾರ್ಯಗಳಲ್ಲಿ ಇಂದಿಗೂ ಕೂಡ ಅಸಮಾನತೆಗಳಿವೆ. ಆದ್ರೆ ಇಂದಿನ ದಿನಗಳಲ್ಲಿ ಹೆಣ್ಣಿನ ಸ್ಥಾನಗಳು ಕೂಡ ಬದಲಾಗಿದ್ದು ಗಂಡಿಗೆ ಸಮನಾಗಿ ತಾನಿದ್ದೇನೆ ಎಂಬುದನ್ನು ಅದೆಷ್ಟೋ ಬಾರಿ ಮಹಿಳೆ ತೋರಿಸಿಕೊಟ್ಟಿದ್ದಾರೆ.
ಹೌದು ಕಾರವಾರದಲ್ಲಿ ಇಂತಹದೊಂದು ಬದಲಾವಣೆ ಪ್ರತಿ ದಿನ ನೋಡುವ ಧಾರವಾಹಿಯಿಂದ ಬದಲಾಗಿದೆ. ಸಮಾಜ ಕೂಡ ಮಾನ್ಯ ಮಾಡಿ ಅವಕಾಶ ಮಾಡಿಕೊಟ್ಟಿದ್ದು ಶ್ಲಾಘನೀಯ.
ಅರೇ ಅಂತದ್ದೇನು ಅನ್ನುತ್ತೀರಾ?,ಒಂದುಷ್ಟು ಪ್ಲಾಷ್ ಬ್ಯಾಕ್ ಗೆ ಬರೋಣ.
ಕಾರವಾರ ತಾಲುಕಿನ ಮಲ್ಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರ್ನಿಪೇಟೆ ಎಂಬ ಊರಿನಲ್ಲಿ ವಾಸವಾಗಿರುವ ಚಂದ್ರಕಾಂತ ಬುದೊ (57) ಎಂಬುವವರು ತಮಗೆ ಗಂಡುಮಗು ಬೇಕು ಎಂಬ ಪ್ರಯತ್ನಕ್ಕೆ ಒಂಬತ್ತು ಹೆಣ್ಣುಮಕ್ಕಳಾದರು.
ಕೊನೆಗೂ ಅವರಿಗೆ ಗಂಡುಮಗು ಆಗಲಿಲ್ಲ. ಆದರೂ ತಮ್ಮ ದುಡಿಮೆಯಲ್ಲಿ ಮಕ್ಕಳನ್ನು ಚನ್ನಾಗಿ ಸಾಕಿ ಮೂರು ಜನ ಹೆಣ್ಣುಮಕ್ಕಳಿಗೆ ಮದುವೆ ಮಾಡಿದ್ದರು. ದೃರಾದೃಷ್ಟ ವಶಾತ್ ನಿನ್ನೆ ಇವರು ಹೃದಯಾಘಾತ ದಿಂದ ಕೊನೆಯುಸಿರೆಳೆದಿದ್ದಾರೆ.

ಆದ್ರೆ ಧಾರ್ಮಿಕ ವಿಧಿ ನಿಯಮಗಳ ಪ್ರಕಾರ ಇವರ ಕರ್ಮಾಂಗ ಮಾಡಲು ಗಂಡುಮಕ್ಕಳು ಮಾತ್ರ ಅರ್ಹರಾಗಿದ್ದರಿಂದ ಕರ್ಮಾಂಗ ಮಾಡಲು ಯಾರೂ ಇರಲಿಲ್ಲ. ಮಗನ ಸ್ಥಾನದಲ್ಲಿ ನಿಂತು ಅಳಿಯರಾಗಲಿ ,ರಕ್ತಸಂಬಂಧಿಗಳಾಗಲಿ ಶಾಸ್ತ್ರದ ನೆಪದಲ್ಲಿ ಮಾಡಲಿಲ್ಲ. ಆದ್ರೆ ಅವರ ಚಿತೆಗೆ ಅಗ್ನಿ ಸ್ಪರ್ಷ ಮಾಡಲೇ ಬೇಕಿತ್ತು.
ಆಗ ನೆನಪಾಗಿರುವುದೇ ಖಾಸಗಿ ವಾಹಿನಿಯಲ್ಲಿ ಬರುವ ಕನ್ನಡತಿ ಧಾರವಾಹಿಯಲ್ಲಿನ ಪ್ರಮುಖ ಪಾತ್ರದಾರಿ ತಾನು ಹೆಣ್ಣಾಗಿಯೂ ತಂದೆಯ ಕರ್ಮಾಧಿಗಳನ್ನು ಮಾಡಿದ್ದು.
ಈ ರೀತಿಯ ಧಾರ್ಮಿಕ ಸುಧಾರಣೆಯ ಪ್ರೇರಣೆಯೇ ಚಿತೆಯ ಮೇಲಿದ್ದ ಚಂದ್ರಕಾಂತ್ ರವರ ಶವದ ಕರ್ಮಾಂಗ ಮಾಡಲು ಗೋವಾ ದಲ್ಲಿ ಕೆಲಸ ಮಾಡುತಿದ್ದ ಇವರ ನಾಲ್ಕನೇ ಪುತ್ರಿ ಕುಮಾರಿ ಸರೋಜಾ ಮುಂದೆಬಂದಿದ್ದಾರೆ.

ತಾನು ಹೆಣ್ಣಾದರೇನು ಅವರು ನನ್ನ ತಂದೆ ಎಂಬ ಕರುಳಿನ ಪ್ರೀತಿ ಕರ್ಮ ಸಂಸ್ಕಾರಕ್ಕೆ ನಾಂದಿಯಾಯಿತು.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಸಮಾಜಗಳಲ್ಲಿ ಬದಲಾವಣೆ ತರುತ್ತಿರುವುದು ನಿಜವಾಗಿಯೂ ಶ್ಲಾಘನೀಯ.
ಗಂಡು ಎಂಬ ಭ್ರಮೆಯ ಲೋಕದಲ್ಲಿರುವವರಿಗೆ ಇಂದಿನ ಈ ಘಟನೆ ಮಾದರಿಯಾಗಿದೆ.