ಕಾರವಾರ :- ಶಾಸಕ ಎನ್ ಮಹೇಶ್ ರವರ ಆಪ್ತ ಸಹಾಯಕ ಎಂದು ಹೇಳಿಕೊಂಡು ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ರವರಿಗೆ ಕರೆ ಮಾಡಿ ₹50ಸಾವಿರ ಹಣ ಪಡೆದು ವಂಚಿಸಿದ ರಾಮನಗರ ಮೂಲದ ವ್ಯಕ್ತಿಯನ್ನು ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ರಾಮನಗರದ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್(23) ಶಾಸಕರಿಗೆ ವಂಚಿಸಿ ಈಗ ಬಂಧಿತನಾದ ವ್ಯಕ್ತಿ.
ಘಟನೆ ಏನು?

ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರಿಗೆ 15 ದಿನದ ಹಿಂದೆ ರಾಮನಗರದ ಕನಕಪುರ ತಾಲ್ಲೂಕಿನ ದೊಡ್ಡಮಳಲವಾಡಿ ಗ್ರಾಮದ ಸಚಿನ್ ಎಂಬ ವ್ಯಕ್ತಿ ಕರೆ ಮಾಡಿ ತಾನು ಶಾಸಕ ಎನ್ .ಮಹೇಶ್ ರವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡಿದ್ದಾನೆ. ನಂತರ ತನಗೆ ಅರ್ಜೆಂಟಾಗಿ 50 ಸಾವಿರ ಹಣ ಬೇಕಿದೆ ಎಂದು ಸುಳ್ಳುಹೇಳಿ ತನ್ನ ಸ್ನೇಹಿತನ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದಾನೆ.
ಇನ್ನು ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರು ಬೆಂಗಳೂರಿಗೆ ತೆರಳಿದ್ದಾಗ ವಿಧಾನಸೌದದಲ್ಲಿ ಎನ್ .ಮಹೇಶ್ ರವರು ಮುಖಾಮುಖಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ರವರು ತಾವು ಮಹೇಶ್ ರವರ ಆಪ್ತ ಕಾರ್ಯದರ್ಶಿ ರವರಿಗೆ 50ಸಾವಿರ ಹಣ ನೀಡಿರುವ ಕುರಿತು ಮಾತನಾಡಿದ್ದಾರೆ. ಆಗ ಅಲ್ಲಿಯೇ ಇದ್ದ ಅವರ ಆಪ್ತಕಾರ್ಯದರ್ಶಿ ತಾವು ಕೇಳಿಲ್ಲವೆಂದು ತಿಳಿಸಿದ್ದಾರೆ.ಕೊನೆಗೆ ತಾವು ವಂಚನೆಗೆ ಒಳಗಾದ ಕುರಿತು ಶಾಸಕರಿಗೆ ಅರಿವಾಗಿದೆ.
ತಕ್ಷಣದಲ್ಲಿ ಶಾಸಕ ಎನ್. ಮಹೇಶ್ ರವರ ಆಪ್ತ ಕಾರ್ಯದರ್ಶಿ ಕೊಳ್ಳೆಗಾಲ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಈತ ಇದನ್ನೇ ಕಸುಬನ್ನಾಗಿಸಿಕೊಂಡಿದ್ದು ಕೇವಲ ಶಾಸಕಿ ರೂಪಾಲಿ ನಾಯ್ಕ ರವರಿಗಲ್ಲದೇ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಸೇರಿದಂತೆ ಹಲವರಿಗೆ ಇದೇ ರೀತಿಯಲ್ಲಿ ಕರೆಮಾಡಿ ವಂಚಿಸುವ ಪ್ರಯತ್ನ ಮಾಡಿದ್ದು ಬೆಳಕಿಗೆ ಬಂದಿದೆ.