ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಹೊಸಗುಂದ ಗ್ರಾಮದ ಕಂಚಿ ಕಾಳಮ್ಮ ದೇವಸ್ಥಾನದಲ್ಲಿ ಕಳ್ಳುರು ಕಳೆದ ತಿಂಗಳು 24 ರಂದು ದೇವಸ್ಥಾನದಲ್ಲಿದ್ದ ಕಂಚಿನ ಘಂಟೆಯನ್ನು ಕದ್ದು ಪರಾರಿಯಾಗಿದ್ದರು. ಈ ಕುರಿತು ದೇವಸ್ಥಾನದ ಮ್ಯಾನೇಜರ್ ನಟರಾಜ್ ಹೆಬ್ಬಾರ್ ರವರು ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿ 15 ದಿನದ ನಂತರ ಕಂಚಿ ಕಾಳಮ್ಮ ದೇವಸ್ಥಾನಕ್ಕೆ ಆಗಮಿಸಿದ ಕಳ್ಳರು ದೇವರ ಎದುರು ಕಂಚಿನ ಗಂಟೆಯನ್ನು ಇಟ್ಟು ,ತಪ್ಪುಕಾಣಿಕೆ ರೂಪದಲ್ಲಿ ಅದರ ಅಡಿಯಲ್ಲಿ 501₹ ವನ್ನು ಇಟ್ಟು ಕರ್ಪೂರವನ್ನು ಬೆಳಗಿಸಿ ಪರಾರಿಯಾಗಿದ್ದಾರೆ.

ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದ ಅರ್ಚಕರು.
ಮಾ.24 ಮೂರು ಜನ ಯುವಕರು ಗಂಟೆಯನ್ನು ಕಳ್ಳತನಮಾಡಿ ದೇವಸ್ಥಾನ ದಿಂದ ಹೊರಹೋಗುವಾಗ ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಈ ವೇಳೆ ದೇವರ ಬಳಿ ಗಂಟೆ ಇಲ್ಲದ್ದನ್ನು ಕಂಡ ಅರ್ಚಕರು ಮೂರುಜನ ಯುವಕರನ್ನು ವಿಚಾರಿಸಲು ತೆರಳಿದಾಗ ಅವರನ್ನು ದೂಡಿ ಅಲ್ಲಿಂದ ಪರಾರಿಯಾಗಿದ್ದರು. ಆದರೇ ಇದೀಗ ಗಂಟೆ ಕದ್ದ ತಪ್ಪಿನ ಅರಿವಾಗಿ ಕಳ್ಳರು ದೇವರಿಗೆ ತಪ್ಪು ಕಾಣಿಕೆ ನೀಡಿ , ಗಂಟೆಯನ್ನು ಮರಳಿಸಿ ತೆರಳಿರುವುದು ಗ್ರಾಮದಲ್ಲಿ “ಗಂಟೆಯಂತೆ” ಸದ್ದು ಮಾಡುತ್ತಿದೆ.