

ಕಾರವಾರ:-ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಯ ಬದುಕೇ ಬದಲಾಗುತ್ತದೆ.ಶಿಕ್ಷಕನ ಪಾತ್ರ ಅಂತಹ ಮಹತ್ವದ್ದಾಗಿದೆ.ಆದ್ರೆ ದೇವರ ಮನೆ ಎಂದು ಕರೆಯುವ ಶಿಕ್ಷಕರ ಕಚೇರಿಗಳು ಮಾತ್ರ ಹಾಳು ಕೊಂಪೆಯಂತೆ ಇರುವುದು ನಮ್ಮ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ.
ಒಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿಕ್ಷಕರು ತಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಲು ಹೆದರುವಂತಿತ್ತು.

ಬಣ್ಣವಿಲ್ಲದ ಗೋಡೆಗಳು,ಜೋತು ಬಿದ್ದ ಕಿಟಕಿಗಳು,ಕಚೇರಿಯಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ಬಿದ್ದಿರುತಿದ್ದ ಕಡತಗಳು,ಕಚೇರಿಯ ಆವರಣ ತುಂಬಾ ತುಂಬಿದ ಮಟ್ಟಿಗಳು ಹೀಗೆ ಅಲ್ಲಿನ ಚಿತ್ರಣ ಸ್ಮಷಾನದಲ್ಲಿ ನೇತು ಹಾಕಿದ ದೃಷ್ಠಿ ಗೊಂಬೆಯಂತೆ ಗೋಚರಿಸುತಿತ್ತು.
ಆದ್ರೆ ಇತ್ತೀಚೆಗೆ ವರ್ಗವಾಗಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ರವರು ತಮ್ಮ ಕಚೇರಿಯನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಇದಕ್ಕೆ ಶಿಕ್ಷಕರ ಸಂಘ ಸಹ ಸಹಕಾರ ನೀಡಿತು.

ಆದ್ರೆ ಸರ್ಕಾರದ ಅನುದಾನವಿಲ್ಲ , ದಾನಿಗಳ ಸಹಕಾರದಲ್ಲಿ ಕೇವಲ ಸುಣ್ಣ ಬಣ್ಣ ಮಾಡಿ ಬಿಟ್ಟರೆ ಸಾಕಾಗದು, ಇಡೀ ಜಿಲ್ಲೆಗೆ ಮಾದರಿಯಾಗಬೇಕು ಎಂಬ ಹಂಬಲದಿಂದ ಲಾಕ್ ಡೌನ್ ಸಂದರ್ಭದಲ್ಲಿ ಕಾಲಿ ಕುಳಿತಿದ್ದ ತಮ್ಮ ಕ್ಷೇತ್ರದ ಪ್ರೌಡಶಾಲಾ ಚಿತ್ರಕಲಾ ಶಿಕ್ಷರನ್ನು ಕರೆಯಿಸಿ ಈ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.

ಚಿತ್ರಕಲಾ ಶಿಕ್ಷಕರಾದ ಸಂಜಯ್ ಗುಡಿಗಾರ್ ,ಮಹೇಶ್ ನಾಯ್ಕ,ನಾರಾಯಣ ಮೊಗೇರ,ಸಾದಿಕ್ ಶೇಖ್,ಮಂಜುನಾಥ ದೇವಾಡಿಗ,ಚನ್ನವೀರ ಹೊಸಮುನಿ ರವರ ತಂಡ ಕೇವಲ ಕೆಂಪು ಮತ್ತು ಬಿಳಿಯ ಬಣ್ಣವನ್ನು ಬಳಸಿ ಇಡೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ದೇವಸ್ಥಾನದಂತೆ ಕಂಗೊಳಿಸುವಂತೆ ಮಾಡಿದ್ದಾರೆ.
ಜಿಲ್ಲೆಯ ಸಂಪ್ರದಾಯಿಕ ಜನಪದ ಕಲೆ,ವರ್ಲಿ ಮತ್ತು ಕಾಲ್ಪನಿಕ ಚಿತ್ರಗಳು ಬಿರುಕು ತುಂಬಿದ್ದ ಗೋಡೆಗಳನ್ನು ಕಳೆಗಟ್ಟಿಸಿದೆ. ಹತ್ತು ದಿನಗಳ ಕಾಲ ಪ್ರೌಡಶಾಲಾ ಚಿತ್ರಕಲಾ ಶಿಕ್ಷಕರು ಯಾವುದೇ ಅಪೇಕ್ಷೆ ಇಲ್ಲದೆ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸುಂದರವಾಗಿಸಿದ್ದಾರೆ.ಸರ್ಕಾರದ ಅನುದಾನ ಬೇಡದ ಶಿಕ್ಷಕರ ಸಂಘ ಬಣ್ಣ ನೀಡಿ ಬೆಳಕಾಗುವಂತೆ ಮಾಡಲಾಗಿದೆ.
ಇನ್ನು ಕಚೇರಿಯ ಒಳಗೆ ಶಿಕ್ಷಕ ಸದಾಶಿವ ದೇಶಭಂಡಾರಿಯವರು ತಮ್ಮ ಸ್ವಂತ ಕರ್ಚಿನಲ್ಲಿ ಸುಂದರ ಗೊಳಿಸಿದ್ದಾರೆ.
ಕಚೇರಿಯ ಒಳ ಗೇಟನ್ನು ಪ್ರವೇಶಿಸುತಿದ್ದಂತೆ ಶಿಕ್ಷಣವೇ ಜೀವನ,ಜಿವನವೇ ಶಿಕ್ಷಣ ಎಂಬ ಉಕ್ತಿಗಳು ಸ್ವಾಗತಿಸುತ್ತದೆ. ಗೋಡೆಗಳಲ್ಲಿ ಯೋಗ ಮುದ್ರೆಗಳು,ಅಕ್ಷರ ದಾಸೋಹ,ನಾಡಹಬ್ಬ ಮುಂತಾದ ಚಿತ್ರಗಳು ಇಲ್ಲಿ ಬರುವ ಜನರ ಮನಸ್ಸನ್ನು ಕದಿಯದೇ ಇರದು.
ಸರ್ಕಾರಿ ಕಚೇರಿ ಎಂದರೆ ಸರ್ಕಾರವೇ ಎಲ್ಲಾ ಮಾಡಬೇಕು ಎಂಬ ದೋರಣೆ ಹೊಂದಿದ ಈ ದಿನಗಳಲ್ಲಿ ಯಾವ ಪ್ರತಿಫಲ ಹಂಬಲವಿಲ್ಲದೇ ಸರ್ಕಾರಿ ಕಚೇರಿಯನ್ನು ಬದಲಿಸಿದ ಈ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಪ್ರಿಯ ಓದುಗರೇ ನಿಮ್ಮೂರಿನ ಸುದ್ದಿ ಹಾಗು ಲೇಖನಗಳನ್ನು ನಮ್ಮ ಪತ್ರಿಕೆಗೆ ಕಳುಹಿಸಲು ಈ ಕೆಳಗಿನ ನಂಬರ್ ಗೆ ವಾಟ್ಸ್ ಅಪ್ ಮಾಡಿ:- 9741058799