ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಪ್ರವಾಹ ಆಗುತ್ತಿದೆ. ಎಲ್ಲೋ ಮಳೆಯಾದರೆ ಮತ್ತೊಂದೆಡೆ ಪ್ರವಾಹ ಆಗುತ್ತದೆ. ಈ ಕಾರಣದಿಂದ ಪ್ರವಾಹದಂಥ ಪ್ರಾಕೃತಿಕ ವಿಕೋಪಗಳನ್ನು ಮುಂಚಿತವಾಗಿ ತಿಳಿಯಲು ಹಾಗೂ ಜನರಿಗೆ ಸೂಚನೆ ನೀಡಲು ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಗುರುವಾರ ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಕೇಂದ್ರೀಕೃತ ವ್ಯವಸ್ಥೆಯೊಂದನ್ನು ಜಾರಿಗೊಳಿಸಲಾಗುವುದು. ನೆರೆ ಪೀಡಿತ ಪ್ರದೇಶಗಳನ್ನು ಗುರುತಿಸಿ, ಯಾವ ಕಾರಣಗಳಿಂದ ಪ್ರವಾಹ ಆಗಲಿದೆ, ಎಷ್ಟು ಸಮಯದಲ್ಲಿ ಹಾಗೂ ಯಾವ ಮಟ್ಟದಲ್ಲಿ ಆಗಲಿದೆ ಎಂದು ಸಾಕಷ್ಟು ಮೊದಲೇ ವೈಜ್ಞಾನಿಕ ಕ್ರಮದಿಂದ ತಿಳಿಯಲು ಸಾಧ್ಯವಿದೆ. ಜೊತೆಗೇ ಆ ಪ್ರದೇಶಗಳ ಜನರನ್ನು ಸುರಕ್ಷಿತವಾಗಿ ತೆರವು ಮಾಡಬಹುದು. ಮುಂದಿನ ಮಳೆಗಾಲಕ್ಕೂ ಮೊದಲು ಜಾರಿಗೆ ತರಲು ಪ್ರಯತ್ನಿಸಲಾಗುವುದು ಇದಕ್ಕಾಗಿ ಜಿಲ್ಲಾ ಕಚೇರಿಯಲ್ಲಿ ಪ್ರತ್ತೇಕ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಜೋಯಿಡಾ ಭಾಗಕ್ಕೆ ತೆರಳುವ ಅಣಶಿ ಘಟ್ಟದಲ್ಲಿ ಹೆದ್ದಾರಿಯಿಂದ ಮಣ್ಣನ್ನು ಸ್ಥಳೀಯರು ತೆರವು ಮಾಡಿದ್ದಾರೆ. ಅವರ ಶ್ರಮದಾನ ಶ್ಲಾಘನೀಯ. ಆ ಭಾಗದಲ್ಲಿ ಮಣ್ಣಿನ ಧಾರಣಾ ಸಾಮರ್ಥ್ಯದ ಬಗ್ಗೆ ಅಧ್ಯಯನ ಆಗಬೇಕಿದೆ. ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್ ಕಾಲೇಜು ಮತ್ತು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡಗಳು ಪರಿಶೀಲನೆ ಮಾಡಿವೆ. ನಾಡಿದ್ದು ಅವರ ವರದಿಗಳು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಕರಾವಾರ ದಲ್ಲಿ ಅತೀ ಹೆಚ್ಚು ಲಸಿಕೆ
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಪ್ರವಾಸಿ ತಾಣಗಳು, ಸಾರ್ವಜನಿಕರು ಹೆಚ್ಚು ಬಂದು ಹೋಗುವ ಸ್ಥಳಗಳಲ್ಲಿ ಒಂದು ವಾರ, 10 ದಿನಗಳಿಗೊಮ್ಮೆ ಸ್ಥಳೀಯರ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಸೋಂಕು ದೃಢಪಡುವ ಪ್ರಮಾಣವು ಶೇ 1ಕ್ಕಿಂತ ಕಡಿಮೆಯಿದೆ ಎಂದರು.
ಲಸಿಕಾ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜಿಲ್ಲೆಯಲ್ಲಿ 10.24 ಲಕ್ಷ ಜನರಿಗೆ ಲಸಿಕಾ ಗುರಿ ಹೊಂದಲಾಗಿದೆ. ಈಗಾಗಲೇ ಸುಮಾರು 6 ಲಕ್ಷ ಮಂದಿ ಕನಿಷ್ಠ ಒಂದು ಡೋಸ್ ಪಡೆದುಕೊಂಡಿದ್ದಾರೆ. ಕಾರವಾರ ತಾಲ್ಲೂಕಿನಲ್ಲಿ ಶೇ 91ರಷ್ಟು ಪ್ರಗತಿಯಾಗಿದೆ ಎಂದರು.
ಇಂದಿನ ಜಿಲ್ಲಾವಾರು ಕೋವಿಡ್ ಲಸಿಕೆ ಮಾಹಿತಿ ಈ ಕೆಳಗಿನಂತಿದೆ.

ಪ್ರವಾಸೋಧ್ಯಮಕ್ಕೆ ಪ್ರತ್ಯೇಕ ವೆಬ್ ಪೋರ್ಟಲ್.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವೆಬ್ ಪೋರ್ಟಲ್ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಜಿಲ್ಲೆಯ ಸಂಸ್ಕೃತಿ, ವನ್ಯಜೀವಿ, ಕಡಲತೀರಗಳು, ಜನಜೀವನ, ಈ ರೀತಿ ಏಳೆಂಟು ವಿಭಾಗಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ತಜ್ಞರ ಮೂಲಕ ವಿಷಯಗಳನ್ನು ಸಿದ್ಧಪಡಿಸಿಕೊಂಡು ವೆಬ್ಸೈಟ್ ಇನ್ನೆರಡು ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ಸಿದ್ದಾಪುರ ಗಾಂಜಾ ಮಾರಾಟಗಾರರ ಬಂಧನ.

ಸಿದ್ದಾಪುರ: ಸ್ಕೂಟಿಯ ಮೇಲೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ರಂಜನ ಮಹಾಲೆ ಮತ್ತು ಮಂಜುನಾಥ ಎಂಬವರನ್ನು ತಾಲ್ಲೂಕಿನ ಚುರಿಕಟ್ಟಾ ಕ್ರಾಸ್ ಹತ್ತಿರ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಿಎಸ್ಐ ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದು, ಆರೋಪಿಗಳಿಂದ ಗಾಂಜಾ, ಮೋಟಾರ್ ಸೈಕಲ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಇಸ್ಪೀಟ್ ಅಡ್ಡೆಯಮೇಲೆ ದಾಳಿ
ಸಿದ್ದಾಪುರ ತಾಲ್ಲೂಕಿನ ಬಿಳಗಿಯಲ್ಲಿ ಸಾರ್ವಜನಿಕ ಸ್ಥಳದ ಕಚ್ಚಾ ರಸ್ತೆಯಲ್ಲಿ ಇಸ್ಪೀಟ್ ಹಾಗೂ ಜುಗಾರಿ ಆಟ ನಡೆಯುತ್ತಿದ್ದಾಗ ದಾಳಿ ನಡೆಸಿದ ಪಿಎಸ್ಐ ಮಹಾಂತೇಶ್ ಕುಂಬಾರ ಹಾಗೂ ಸಿಬ್ಬಂದಿ 7 ಜನರನ್ನು ಬಂಧಿಸಿದ್ದಾರೆ. ಅವರಿಂದ ₹ 1,250 ಹಾಗೂ ಆಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ