ಕಾರವಾರ:- ಭಗ್ನಪ್ರೇಮಿಯಿಂದ ಮದುವೆ ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ
ಅವರ್ಸಾ ಗ್ರಾಮದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಅಂಕೋಲ ತಾಲೂಕಿನ ಸಕ್ಕಲ ಬ್ಯಾಣ ಎಂಬ ಊರಿನಲ್ಲಿ ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಬೆಳಂಬೆಳಗ್ಗೆ ಪಟಾಕಿ ಹೊಡೆದಂತೆ ಸದ್ದು ಕೇಳಿದೆ. ಹೊರಗೆ ಬಂದು ನೋಡಿದಾಗ 2013 ರಲ್ಲಿ ಹತ್ಯೆ ಪ್ರಕರಣ ,2017 ರಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಮಾಡಿದ ರೌಡಿ ಶೀಟರ್ ರಾಜೇಶ್ ಎಂಬಾತ ಮನೆಯ ಮುಂದೆ ನಿಂತು ಗುಂಡು ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಅದೃಷ್ಟವಶಾತ್ ಯಾರು ಹೊರಗೆ ಬರದ ಕಾರಣ ಯಾರಿಗೂ ಅಪಾಯವಾಗಿಲ್ಲ. ಇನ್ನು ಆತ ಹೊಡೆದ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿದೆ. ನಂತರ ಆತ ಪರಾರಿಯಾಗಿದ್ದಾನೆ.

ಘಟನೆ ಏನು ?
ಧನ್ಯ (ಹೆಸರು ಬದಲಿಸಲಾಗಿದೆ.) ಎನ್ನುವ ಯುವತಿ ಸುಂಕಸಾಳದಲ್ಲಿ ಕಾಲೇಜು ಓದುತಿದ್ದಳು. ಈ ವೇಳೆ ಈಕೆಯ ಹಿಂದೆ ವಜ್ರಳ್ಳಿ ಗ್ರಾಮದ ರೌಡಿ ಶೀಟರ್ ರಾಜೇಶ್ ಗಣಪತಿ ಗಾಂವಕರ್ ಈಕೆಯ ಹಿಂದೆ ಬಿದ್ದಿದ್ದ ಎಂದು ಹೇಳಲಾಗುತ್ತಿದೆ.

ಆದರೇ ಯುವತಿ ಈತನನ್ನು ಪ್ರೀತಿಸಿರಲಿಲ್ಲ ಎಂದು ಹೇಳಲಾಗಿದೆ. ಆದರೂ ಬಿಡದೇ ಈಕೆಯನ್ನು ಕಾಡಿಸುತಿದ್ದ ಎಂದು ಸಂಬಂಧಿಗಳು ತಿಳಿಸಿದ್ದಾರೆ. ಇನ್ನು ಆಪಾದಿತ ಈ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಗುಂಡುಹಾರಿಸಿ ಪ್ರಕರಣ ಎದುರಿಸುತಿದ್ದಾನೆ. ಇನ್ನು ಯುವತಿ ಕಾಲೇಜು ಶಿಕ್ಷಣ ಮುಗಿಸಿ ಬಿ.ಎಡ್ ಮಾಡಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಈ ವೇಳೆ ಕೇಣಿಯ ಯುವಕನ ಜೊತೆ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಇಂದು ಮದುವೆ ನೆರವೇರುತಿತ್ತು.
ಆದರೆ ಇಂದು ಏಕಾ ಏಕಿ ಬಂದ ರಾಜೇಶ್ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಮಧುವಿನ ಮನೆಯ ಕಿಟಕಿ ಭಾಗ ಹಾಗೂ ಒಳಭಾಗದಲ್ಲಿ ಗುಂಡು ತಾಗಿದ್ದು ಯಾರಿಗೂ ಅಪಾಯವಾಗಿಲ್ಲ.
ಬಿಗಿ ಪೊಲೀಸ್ ವ್ಯವಸ್ತೆಯಲ್ಲಿ ವಿವಾಹ.

ಇನ್ನು ಗುಂಡಿನ ದಾಳಿಯಿಂದ ಬೆದರಿದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲಾಯಿತು. ಮದುವೆ ಮಂಟಪದಲ್ಲಿ ಬಿಗಿ ಪೊಲೀಸ್ ಬಂದವಸ್ತ್ ಮೂಲಕ ವಿವಾಹ ಸಾಂಗವಾಗಿ ನೆರವೇರಿತು.

ಇನ್ನು ಘಟನೆ ಸಂಬಂಧ ವಧುವಿನ ಕುಟುಂಬದವರು ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ.