ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 248 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಇದಲ್ಲದೇ ಇಂದು ಶಾಲಾ ಮಕ್ಕಳಿಗೂ ಕರೋನಾ ಪಾಸಿಟಿವ್ ವರದಿಯಾಗಿದ್ದು ಕಾರವಾರ ನಗರದ ಬಾಲಮಂದಿರದಲ್ಲಿ 17 ಮಕ್ಕಳು ಹಾಗೂ ಕಿರುವತ್ತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 8 ಮಕ್ಕಳಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಈ ಶಾಲೆಗಳಿಗೆ ರಜೆ ಘೋಷಿಸಿ ಬಂದ್ ಮಾಡಲಾಗಿದೆ.
ಇಂದಿನ ತಾಲೂಕುವಾರು ಕರೋನಾ ಪಾಸಿಟಿವ್ ವಿವರ ನೋಡಿ:-

ಶಾಲಾ ಕಾಲೇಜುಗಳಿಗೆ ಕಠಿಣ ನಿಯಮ ಜಾರಿ?
ಜಿಲ್ಲೆಯ ಪ್ರತೀ ಶಾಲೆ, ಕಾಲೇಜುಗಳನ್ನು ಗಮನ ಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಯಾವ ಶಾಲೆ,ಕಾಲೇಜುಗಳಲ್ಲಿ ಐದಕ್ಕಿಂತ ಹೆಚ್ಚು ಕರೋನಾ ಪಾಸಿಟಿವ್ ಆದಲ್ಲಿ ಅಂತಹ ಶಾಲೆಗಳಿಗೆ ರಜೆ ನೀಡಲು ಸೂಚಿಸಲಾಗಿದೆ.
ಇನ್ನು ಶಾಲಾ,ಕಾಲೇಜುಗಳಿಗೆ ವಲಯ ಮಟ್ಟದಲ್ಲಿ ಕರೋನಾ ಪಾಸಿಟಿವ್ ಆದರೇ ಮಾತ್ರ ರಜೆ ಇರಲಿದ್ದು ಉಳಿದ ಶಾಲಾಕಾಲೇಜುಗಳು ಎಂದಿನಂತೆ ನಡೆಯಲಿದೆ.
15 ದಿನಗಳಿಗೊಮ್ಮೆ ಅಂಗನವಾಡಿ ಟೀಚರ್ಗಳ ಸ್ಯಾಂಪಲ್ ಪಡೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನು ಅಂಗನವಾಡಿಯಲ್ಲಿ ಯಾರಾದ್ರೂ ಒಬ್ಬರಿಗೆ ಕೊರೊನಾ ಬಂದಲ್ಲಿ ಅಂಗನವಾಡಿ ಕೂಡಾ ಬಂದ್ ಮಾಡಲಾಗುತ್ತದೆ.
ಶಾಲಾ- ಕಾಲೇಜುಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಲು ಆಯಾ ಸಂಸ್ಥೆಯ ಮುಖ್ಯಸ್ಥರೇ ಜವಾಬ್ದಾರಾಗಿದ್ದು ಶಾಲಾ- ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಎಲ್ಲಾದರೂ ದೂರ ಸಂಚಾರ ಮಾಡುವ ಮುನ್ನ ಆಯಾ ಸಂಸ್ಥೆಯ ಮುಖ್ಯಸ್ಥರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಶಿಕ್ಷಕರು, ಉಪನ್ಯಾಸಕರು ಹಿಂತಿರುಗಿದ ಬಳಿಕವೂ ಹೋಂ ಐಸೋಲೇಶನ್ ಬಗ್ಗೆ ಸಂಸ್ಥೆಯ ಮುಖ್ಯಸ್ಥರಿಂದ ಮಾಹಿತಿ ಸಂಗ್ರಹ ಅಗತ್ಯವಾಗಿದೆ. ಜನರು ತಮ್ಮ ಕುಟುಂಬದಲ್ಲಿ ಯಾರಿಗಾದ್ರೂ ಪಾಸಿಟಿವ್ ಇದ್ದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡದಂತೆ ಹಾಗೂ ಸೋಂಕಿತರ ಪ್ರಾಥಾಮಿಕ ಸಂಪರ್ಕವಾಗಿದ್ರೂ ಶಿಕ್ಷಣ ಸಂಸ್ಥೆಗಳಿಗೆ ಯಾರಾದ್ರೂ ಭೇಟಿ ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಪೋಷಕರಿಗೆ ಕೊರೊನಾ ಇದ್ದಲ್ಲಿ ರಿಪೋರ್ಟ್ ನೆಗೆಟಿವ್ ಬರೋವರೆಗೆ ಮಕ್ಕಳು ಕೂಡಾ ಶಾಲೆಗೆ ಬರಬಾರದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ತಿಳಿಸಿದ್ದಾರೆ.
ಮುಂದಿನ ವಾರ ದಿಂದ ಸಂತೆ ಬಂದ್!
ಜಿಲ್ಲೆಯಲ್ಲಿ ಕಾರವಾರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಹಿಂದೆ ಸಂತೆಗೆ ಅವಕಾಶ ಮಾಡಿಕೊಡಲಾಗಿದ್ದು ಮುಂದಿನವಾರದಿಂದ ಸಂತೆ ಸಹ ಬಂದ್ ಮಾಡಲು ಸೂಚನೆ ನೀಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಜಾತ್ರೆ ಆಚರಣೆಗೆ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು ,ಕಾರವಾರದ ಕುರ್ಮಗಡ,ಜೋಯಿಡಾದ ಉಳವಿ ಜಾತ್ರೆ ಮಹೋತ್ಸವಕ್ಕೆ ನಿರ್ಬಂಧ ವಿಧಿಸಲಾಗಿದ್ದು ಧಾರ್ಮಿಕ ಪೂಜಾ ವಿಧಿ ಮಾತ್ರ ಕೋವಿಡ್ ನಿಯಮದಂತೆ ಆರ್.ಟಿ.ಪಿ.ಸಿ.ಆರ್ ಹಾಗೂ ಎರಡು ಡೋಸ್ ಪಡೆದ ಆಚರಣೆಗೆ ಸಂಬಂಧಿಸಿದವರು ಭಾಗವಹಿಸಬಹುದಾಗಿದೆ.