ಕಾರವಾರ :- ಕರೋನಾ ಎರಡನೇ ಅಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದಡೆ ಕರ್ಫ್ಯೂ ,ಮತ್ತೊಂದೆಡೆ ಬೆಳಗಾಗುತಿದ್ದಂತೆ ದುಂಬಿಯಂತೆ ಮಾರುಕಟ್ಟೆಯಲ್ಲಿ ತುಂಬಿ ತುಳುಕುವ ಜನಸ್ತೋಮವನ್ನು ಸಂಬಾಳಿಸಿ ದಿನವಿಡೀ ಓವರ್ ಡ್ಯೂಟಿ ಮಾಡುವ ಪೊಲೀಸರು ಜನರ ಸೊಂಟದ ಕೆಳಗಿನ ಮಾತುಗಳು, ರಾಜಕಾರಣಿಗಳ ಒತ್ತಡ ಎಲ್ಲವನ್ನೂ ತಡೆದುಕೊಂಡು ಉಸಿರು ಬಿಗಿ ಹಿಡಿದು ಕಾರ್ಯನಿರ್ವಹಿಸುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಗೋವಾ ಗಡಿಯನ್ನು ಹಂಚಿಕೊಂಡಿದೆ. ಹೀಗಿರುವಾಗ ಕರೋನಾ ಹೊತ್ತು ತರುವ ಜನರನ್ನು ಸಂಬಾಳಿಸುವ ಪೊಲೀಸರಿಗೆ ಕರೋನಾ ಬಿಡುವುದುಂಟೆ!
ಹೌದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಇಲಾಖೆ ಮಾಹಿತಿಯಂತೆ 21 ಜನ ಪೊಲೀಸರು ಕರೋನಾ ಸೋಂಕಿತರಾಗಿದ್ದಾರೆ. ಇದರಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ ಇವರ ಕುಟುಂಬದ ಎಂಟು ಜನರಿಗೆ ಕರೋನಾ ಪಾಸಿಟಿವ್ ಬಂದಿದೆ.
ಹೀಗಿರುವಾಗ ಜಿಲ್ಲೆಯ ಪೊಲೀಸ್ ಇಲಾಖೆ ಪೊಲೀಸರನ್ನು ನಿರ್ಲಕ್ಷಿಸಿದೆ. ದಿನವಿಡೀ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಪೊಲೀಸ್ ಇಲಾಖೆಯಿಂದ ಅನುದಾನ ಬಿಡುಗಡೆಯಾದ್ರೂ, ಸ್ಯಾನಿಟೈಸ್,ಮಾಸ್ಕ್ ವ್ಯವಸ್ಥೆಯನ್ನು ಮಾಡದೇ ಪೊಲೀಸ್ ಸಿಬ್ಬಂದಿಯನ್ನು ನಿರ್ಲಕ್ಷ ಮಾಡಲಾಗಿದೆ.
ಜಿಲ್ಲೆಯ ಗಡಿ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಉತ್ತಮ ಮಾಸ್ಕ(N-95) ,ಫೇಸ್ ಕವರ್ ಗ್ಲಾಸ್, ಪಿ.ಪಿ ಕಿಟ್ ,ಸ್ಯಾನಿಟೈಸ್ ಸಹ ನೀಡಿಲ್ಲ. ಹೀಗಿರುವಾಗ ಪೊಲೀಸ್ ಸಿಬ್ಬಂದಿಗಳು ಎಲ್ಲಾ ನ್ಯೂನ್ಯತೆಗಳನ್ನು ಮರೆತು ತಮ್ಮ ಕುಟುಂಬದ ಆರೋಗ್ಯ ಚಿಂತೆಯನ್ನು ಬಿಟ್ಟು ಕರ್ತವ್ಯ ನಿರ್ವಹಿಸುತಿದ್ದಾರೆ.

ಈ ಹಿಂದೆ ಮೊದಲ ಅಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇತಿದಂತೆ ಸಿಬ್ಬಂದಿಗಳಿಗೆ ಅತೀ ಹೆಚ್ಚು ಕರೋನಾ ಪಾಸಿಟಿವ್ ವರದಿಯಾಗಿತ್ತು. ಜೊತೆಗೆ ಇವರ ಕುಟುಂಬದವರು ಸಹ ಕರೋನಾ ಸೋಂಕಿಗೆ ಒಳಗಾಗಿದ್ದರು. ಆದರೇ ಇದೀಗ ಪುನಹಾ ಇಲಾಖೆಯ ನಿರ್ಲಕ್ಷ ಮತ್ತೊಮ್ಮೆ ಪೊಲೀಸರಿಗೆ ಕಂಠಕವಾಗುವ ಸೂಚನೆ ಕಾಣುತ್ತಿದೆ.
ಇಲಾಖೆ ಗಮನ ಹರಿಸಲಿ.
ರಾಜ್ಯದಲ್ಲಿ ಎರಡನೇ ಅಲೆಯಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ಕಡಿಮೆ ಇದೆ.ಜೊತೆಗೆ ಸಾವಿನ ಸಂಖ್ಯೆ ಶೂನ್ಯವಿದೆ. ಆದರೇ ಇಲಾಖೆ ಹೀಗೆ ನಿರ್ಲಕ್ಷಿಸಿದರೆ ಸೋಂಕಿತರ ಸಂಖ್ಯೆ ಏರಿಕೆ ಆಗುವ ಸಾಧ್ಯತೆಗಳಿವೆ.
ಈ ಹಿಂದೆ ಪೊಲೀಸರಿಗೆ ಪೌಷ್ಟಿಕ ಆಹಾರದ ಕಿಟ್ ,ಉತ್ತಮ ಮಾಸ್ಕ,ಸ್ಯಾನಿಟೈಸರ್ ಗಳನ್ನ ಇಲಾಖೆ ನೀಡಿತ್ತು.ಆದರೇ ಇದೀಗ ಇವುಗಳ ಬಗ್ಗೆ ಗಮನ ಹರಿಸದಿರುವುದು ಇಲಾಖೆ ನಿರ್ಲಕ್ಷ ಎದ್ದು ಕಾಣುತ್ತಿದೆ.

ಈ ಕುರಿತು ಕನ್ನಡವಾಣಿ ಗೃಹ ಸಚಿವ ಬೊಮ್ಮಾಯಿರವರ ಗಮನಕ್ಕೆ ತಂದಿದ್ದು ಪೊಲೀಸರಿಗೆ ಅಗತ್ಯವಾಗಿ ಬೇಕಾಗುವ ಎಲ್ಲಾ ವಸ್ತುಗಳನ್ನು ಕೊಡಲಾಗುತ್ತಿದೆ. ಹಿರಿಯ ಅಧಿಕಾರಿಗಳೊಂದಿಗೆ ಮೊನ್ನೆ ಚರ್ಚಿಸಲಾಗಿದೆ. ಅನುದಾನದ ಕೊರತೆ ಇಲ್ಲ. ಪೊಲೀಸರ ಆರೋಗ್ಯ ಕಾಪಾಡುವಲ್ಲಿ ಗೃಹ ಇಲಾಖೆ ಬದ್ಧವಾಗಿದೆ. ತೊಂದರೆ ಆದಲ್ಲಿ ಗಮನಕ್ಕೆ ತರಲಿ. ಯಾವ ಜಿಲ್ಲೆಯಲ್ಲಿ ಏನು ಸಮಸ್ಯೆ ಇದೆ ಎನ್ನುವ ಅರಿವು ನನಗಿದೆ. ಕೆಲವೊಮ್ಮೆ ನ್ಯೂನ್ಯತೆಗಳಾಗುತ್ತದೆ.ಜಿಲ್ಲೆಯ ಎಸ್.ಪಿಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ಎಲ್ಲಾ ವ್ಯವಸ್ಥೆ ಆಗಲಿದೆ ಎಂದಿದ್ದಾರೆ.
ಯಾವ ತಾಲೂಕಿನಲ್ಲಿ ಪೊಲೀಸರಿಗೆ ಸೋಂಕು ಹೆಚ್ಚು ತಗಲಿದೆ ವಿವರ ಈ ಕೆಳಗಿನಂತಿದೆ:-
ಮೊದಲ ಸ್ಥಾನದಲ್ಲಿ ಅಂಕೋಲ, ಎರಡನೇ ಸ್ಥಾನದಲ್ಲಿ ಶಿರಸಿ, ಮೂರನೇ ಸ್ಥಾನದಲ್ಲಿ ಭಟ್ಕಳ ವಿಭಾಗದ ಪೊಲೀಸರಿಗೆ ಸೋಂಕು ಹೆಚ್ಚು ತಗುಲಿದೆ.