ಕಾರವಾರ:- ಕಳೆದ ವರ್ಷ ಜ.21ರಂದು ಕಾರವಾರ ತಾಲ್ಲೂಕಿನಲ್ಲಿ ನಡೆಯಬಾರದ ಘಟನೆಯೊಂದು ನಡೆದಿತ್ತು. ಕಾರವಾರ ಸಮೀಪದ ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಮುಗಿಸಿಕೊಂಡು ಮರಳುತ್ತಿದ್ದಾಗ ದೋಣಿ ಮುಗುಚಿ 16 ಮಂದಿ ಜಲಸಮಾಧಿಯಾಗಿದ್ದರು. ಈ ಘಟನೆ ನಡೆದ ನಂತರದಿಂದ ಕೂರ್ಮಗಡ ಎಂಬ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿಬೀಳುವಂತೆ ಮಾಡುತಿತ್ತು.
ಆದ್ರೆ ಪ್ರತಿ ವರ್ಷಕ್ಕೆ ಒಂದು ಭಾರಿ ನಡೆಯುವ ಕುರ್ಮಗಡದ ನರಸಿಂಹ ದೇವರ ಜಾತ್ರೆ ಮೀನುಗಾರರಿಗೆ ವಿಶೇಷಕೂಡ. ಜಿಲ್ಲೆಯಿಂದಲ್ಲದೇ ಹೊರ ರಾಜ್ಯದಿಂದಲೂ ಇಲ್ಲಿಗೆ ಜನರು ಬರುತ್ತಾರೆ. ಹೀಗಾಗಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಮೂಲಕ ಈ ಜಾತ್ರೆಗೆ ಇಂದು (ಗುರುವಾರ) ಅವಕಾಶ ಮಾಡಿಕೊಟ್ಟಿತು.

ಕಾರವಾರದಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರು ಕಾಳಿ ನದಿಯ ದಡದಿಂದ ಮೆರವಣಿಗೆಯಲ್ಲಿ ಸಾಗಿ ಕುರ್ಮಗಡ ದ್ವೀಪಕ್ಕೆ ಬರುತ್ತದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಬೋಟುಗಳಲ್ಲಿ ತೆರಳುವ ಹಿನ್ನಲೆ ಮೀನುಗಾರರಷ್ಟೇ ಅಲ್ಲದೇ ಸಾಕಷ್ಟು ಜನರು ಜಾತ್ರೆಗೆ ಇಂದು ಆಗಮಿಸಿದ್ದರು .

ಈ ಹಿನ್ನಲೆ ಈ ಬಾರಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನ ಕೈಗೊಂಡಿದ್ದು 9 ಪರ್ಸಿನ್ ಹಾಗೂ 19 ಟ್ರಾಲರ್ ಬೋಟುಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಅಲ್ಲದೇ ಕೇವಲ ಬೈತಕೋಲ ಬಂದರಿನಿಂದ ಮಾತ್ರ ಜನರನ್ನ ಕರೆದೊಯ್ಯಲು ಅವಕಾಶ ನೀಡಿದ್ದು ಭಕ್ತರು ಲೈಫ್ ಜಾಕೆಟ್ಗಳನ್ನ ಧರಿಸಿಯೇ ಬೋಟುಗಳಲ್ಲಿ ಪ್ರಯಾಣಿಸುವಂತೆ ಕ್ರಮ ಕೈಗೊಳ್ಳಲಾಗಿತ್ತು. ಹೀಗಾಗಿ ಸಾಕಷ್ಟು ಮಂದಿ ಭಕ್ತರು ಯಾವುದೇ ಆತಂಕವಿಲ್ಲದೇ ದ್ವೀಪ ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ನರಸಿಂಹ ದೇವರಿಗೆ ಬಾಳೆ ಗೊನೆ ಸೇವೆ ನೀಡುವುದು ಇಲ್ಲಿ ವಿಶೇಷವಾಗಿದ್ದು ದೇವರಲ್ಲಿ ಹರಕೆ ಹೊತ್ತುಕೊಂಡರೆ ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ ಮೀನುಗಾರರು ಪ್ರತಿವರ್ಷ ಜಾತ್ರೆಗೆ ಆಗಮಿಸಿ ದೇವರಿಗೆ ಬಾಳೆಗೊನೆಯನ್ನ ಅರ್ಪಿಸಿ ಮೀನುಗಾರಿಕೆ ಉತ್ತಮವಾಗಿ ನಡೆಯಲಿ ಎಂದು ಬೇಡಿಕೊಳ್ಳುತ್ತಾರೆ.
ಇದನ್ನೂ ಓದಿ:-
ಇನ್ನು ಕೊರೊನಾ ಹಿನ್ನಲೆ ಈ ಬಾರಿ ಗೋವಾ, ಮಹಾರಾಷ್ಟ್ರ ಭಾಗದ ಭಕ್ತರು ಆಗಮಿಸಿಲ್ಲವಾಗಿದ್ದು ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.

ಅಲ್ಲದೇ ಕಳೆದ ಬಾರಿ ದುರಂತ ಸಂಭವಿಸಿದ ಹಿನ್ನಲೆ ಜಾತ್ರೆಗೆ ತೆರಳುತ್ತಿರುವ ಪ್ರತಿಯೊಬ್ಬರ ಹೆಸರನ್ನೂ ನೋಂದಾಯಿಸಿಕೊಳ್ಳಲಾಗುತ್ತಿದ್ದು ದ್ವೀಪದಲ್ಲೂ ಸಹ ಬೋಟುಗಳಿಂದ ಜನರನ್ನ ಸುರಕ್ಷಿತವಾಗಿ ದಡಕ್ಕೆ ಸೇರಿಸಲು ಕ್ರಮ ಕೈಗೊಳ್ಳಲಾಗಿತ್ತು.
ಹಿಂದೆ ನಡೆದ ಕರಾಳ ದುರಂತ ಹಾಗೂ ಕೊರೊನಾ ಆತಂಕದ ನಡುವೆ ದ್ವೀಪ ದೇವರ ಜಾತ್ರೆ ಸಾಂಗವಾಗಿ ನೆರವೇರಿತು.
.