ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅತಿವೃಷ್ಟಿಗೆ ಬಾಧಿತವಾದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯನ್ನು ತಂತ್ರಜ್ಞರು, ಸಿಬ್ಬಂದಿ, ಸೌಲಭ್ಯ ಇಲ್ಲದ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ,ಕಚೇರಿಯಲ್ಲಿ ಕುರ್ಚಿಮೇಜು ,ಓಡಾಡಲು ಒಂದು ವಾಹನ ಬಿಟ್ಟರೇ ನಿಯಮದ ಪ್ರಕಾರ ಇರಬೇಕಾದ ಯಾವುದೂ ಇಲ್ಲ ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ಮಾಧವ ನಾಯಕ ಆರೋಪಿಸಿ ಅಣಕು ನಾಮಫಲಕ ಹಿಡಿದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಶೇಷ ನಿಧಿ ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ ₹70 ಕೋಟಿ ಅನುದಾನದ ಪೈಕಿ ಕರಾವಳಿ ಭಾಗಕ್ಕೆ ಮೀಸಲಿಟ್ಟ ₹55 ಕೋಟಿ ಮೊತ್ತದ ಕಾಮಗಾರಿಯನ್ನು ಈ ಭಾಗದ ಜನಪ್ರತಿನಿಧಿಗಳು ಕೆ.ಆರ್.ಐ.ಡಿ.ಎಲ್.ಗೆ ಕೊಡಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.
ಹಿಂದೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಭೂ ಸೇನಾ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದು ಎಂದು ಕಪ್ಪು ಪಟ್ಟಿಯಲ್ಲಿ ಇಟ್ಟು ಠರಾವು ಮಾಡಲಾಗಿತ್ತು. ಈಗ ಹೆಸರು ಬದಲಾಯಿಸಿ ಕೆ.ಆರ್.ಐ.ಡಿ.ಎಲ್. ಎಂದು ನಾಮಕಾರಣ ಮಾಡಲಾಗಿದ್ದು ,ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ ಎಂದರು.
ಕೆ.ಆರ್.ಐ.ಡಿ.ಎಲ್. ಸಂಸ್ಥೆಯಲ್ಲಿ ಕಾಮಗಾರಿ ನಡೆಸಲು ಬೇಕಿರುವ ಯಾವ ಸೌಲಭ್ಯವೂ ಇಲ್ಲ ಎಂಬುದು ಮಾಹಿತಿ ಹಕ್ಕಿನಿಂದ ಮಾಹಿತಿ ಸಿಕ್ಕಿದೆ. ಆದರೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರು ಇದೇ ಸಂಸ್ಥೆಗೆ ಕಾಮಗಾರಿ ನೀಡಲು ಶಿಫಾರಸ್ಸು ಮಾಡುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ ಎಂದರು.
ಗುತ್ತಿಗೆದಾರರಾದ ರವಿ ನಾಯ್ಕ, ದೀಪಕ ನಾಯ್ಕ, ಗೋವಿಂದ ಗೌಡ, ಸತೀಶ ನಾಯ್ಕ, ಪ್ರವೀಣ ತಳೇಕರ, ರವಿದಾಸ ಕೋಠಾರಕರ್, ರಾಜೇಶ ಶೇಟ್, ಛತ್ರಪತಿ ಮಾಳ್ಸೇಕರ್, ರಾಮ ಜೋಶಿ, ಸುಮೀತ್ ಅಸ್ನೋಟಿಕರ್ ಇದ್ದರು.