ಕಾರವಾರ:- ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ವಂಚನೆಗೊಳಗಾದವರೇ ಹಿಡಿದು, ಹಣ ಮರಳಿಸುವಂತೆ ಒತ್ತಾಯಿಸಿದ ಘಟನೆ ನಡೆದಿದೆ.
ಆರ್ಗಾದ ನಿವಾಸಿ ನಿಲೇಶ ಎಂಬಾತ ಅರಗಾದಲ್ಲಿರುವ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಅನೇಕ ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಸುಮಾರು 20ಕ್ಕೂ ಅಧಿಕ ಮಂದಿಯಿಂದ ಉದ್ಯೋಗ ಕೊಡಿಸುವುದಾಗಿ 50- 60 ಸಾವಿರ ಹಣ ಪಡೆದುಕೊಂಡಿದ್ದಷ್ಟೆ ಅಲ್ಲದೆ, ಉದ್ಯೋಗ ಸಿಕ್ಕಿದೆ ಎಂದು ಹೇಳಿ ಒಂದಿಷ್ಟು ಮಂದಿಗೆ ನೌಕಾಸೇನೆಯ ಹೆಸರಿನಲ್ಲಿ ನಕಲಿ ನೇಮಕಾತಿ ಪತ್ರವನ್ನೂ ಸಹ ಈತ ನೀಡಿದ್ದ.

ಹಣ ಕೊಟ್ಟು ಅತ್ತ ಉದ್ಯೋಗವೂ ಇಲ್ಲದೆ ಇತ್ತ ಕೊಟ್ಟ ಹಣ ವಾಪಸ್ ಇಲ್ಲದೆ ಪರದಾಡುತ್ತಿದ್ದವರು, ವಂಚನೆ ಮಾಡಿದ ನಿಲೇಶನನ್ನು ನಗರಕ್ಕೆ ಕರೆಯಿಸಿಕೊಂಡು ಹುಡುಕಿ ಕರೆತಂದಿದ್ದು, ಕೊಟ್ಟಿರುವ ಹಣ ವಾಪಸ್ ನೀಡುವಂತೆ ಆತನ ಬಳಿ ಪಟ್ಟು ಹಿಡಿದಿದ್ದಾರೆ. ಕೇವಲ ಉದ್ಯೋಗ ನೀಡುವುದಾಗಿ ವಂಚನೆಯಷ್ಟೇ ಅಲ್ಲ, ಕೆಲವರಿಂದ ಕಾರನ್ನೂ ತಿಂಗಳ ಬಾಡಿಗೆಗೆ ಪಡೆದು ಬಾಡಿಗೆ ಹಣವನ್ನೂ ಸಹ ನೀಡದೆ ವಂಚನೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಆದರೇ ಈವರೆಗೂ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಲ್ಲ.