ಕಾರವಾರ :- ಸ್ವತಂತ್ರ ಬಂದು ಇಷ್ಟುವರ್ಷಗಳು ಕಳೆದರೂ ಜೋಯಿಡಾ ತಾಲೂಕಿನ ಬಾಜಾರ್ ಕೋಣಂಗ್ ಕಾತೇಲಿ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಜನರಿಂದ ಮೂಲಭೂತ ಸೌಕರ್ಯ ವದಗಿಸದೇ ಶಾಲೆಗೆ ಹೋಗುವ ಮಕ್ಕಳಿಗಿಗೆ ಬಸ್ ಹಾಗೂ ರಸ್ತೆ ವ್ಯವಸ್ಥೆ ಕಲ್ಪಿಸದ ಹಿನ್ನಲೆಯಲ್ಲಿ ಗ್ರಾಮದ ಜನರು ಕಾರವಾರ -ಲೋಂಡಾ-ಬೆಳಗಾವಿ ರಾಜ್ಯ ಹೆದ್ದಾರಿ 146 ರ ಕಿರುವತ್ತಿಯ ಕುಂಬಾರವಾಡ ರಸ್ತೆಯಯಲ್ಲಿ ವಾಹನ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡು ಒಂದು ವಾರದಲ್ಲಿ ಆಡಳಿತ ವರ್ಗದವರು ಗ್ರಾಮಗಳಿಗೆ ಬಸ್ ವ್ಯವಸ್ಥೆಯನ್ನಾದರೂ ಮಾಡುವಂತೆ ಗಡುವು ನೀಡಿದ್ದಾರೆ.
ಜೋಯಿಡಾದ ಕಿರುವತ್ತಿಯ ಕುಂಬಾರವಾಡ ದಲ್ಲಿ ರಸ್ತೆ ಬಂದ್ ಮಾಡಿದ ಸ್ಥಳೀಯ ಗ್ರಾಮಸ್ಥರು, ತಕ್ಷಣದಲ್ಲಿ ರಸ್ತೆ ಮತ್ತು ಬಸ್ ವ್ಯವಸ್ಥೆ ಗ್ರಾಮಕ್ಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕುಣಬಿ ಸಮಾಜದ ಅಧ್ಯಕ್ಷ ಅಜಿತ್ ಮಿರಾಶಿ ನೇತ್ರತ್ವದಲ್ಲಿ ಸ್ಥಳೀಯ ಜನರು ಹೆದ್ದಾರಿಯಲ್ಲಿ ಕುಳಿತು ಸರ್ಕಾರ,ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಮುಖಂಡರು ,ಇಷ್ಟು ವರ್ಷಗಳು ಕಳೆದರೂ ಸಾವಿರಾರು ಜನರು ಇರುವ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿಲ್ಲ, ಊರಿಗೆ ಬಸ್ ಸಹ ಇಲ್ಲದೇ ಜನರು ಪ್ರತಿ ದಿನ ಓಡಾಡಲು ಸಹ ಕಷ್ಟ ಅನುಭವಿಸಬೇಕಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿಸುವ ವರೆಗೂ ರಸ್ತೆ ಬಂದ್ ಮಾಡಿ ಇಲ್ಲಿಯೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಒಂದು ವಾರದಲ್ಲಿ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಿಕೊಡುವ ಮುಚ್ಚಳಿಕೆಯನ್ನು ಜೋಯಿಡಾ ತಹಶೀಲ್ದಾರ್ ಬರೆದುಕೊಟ್ಟರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಕುಣಬಿ ಸಮಾಜದ ಅಧ್ಯಕ್ಷ ಅಜಿತ್ ಮಿರಾಶಿ ಒಂದು ವಾರದಲ್ಲಿ ಬಸ್ ವ್ಯವಸ್ಥೆ ಮಾಡದಿದ್ದರೇ ಹಾಗೂ ರಸ್ತೆ ವ್ಯವಸ್ಥೆಮಾಡದಿದ್ದರೇ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜೋಯಿಡಾ ಮೂಲಭೂತ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಪ್ರಕಾಶ್ ಮಿರಾಶಿ,ಮಾಜಿ ಶಾಸಕ ಸುನಿಲ್ ನಾಯ್ಕ ,ದೇವಿದಾಸ್ ಮಿರಾಶಿ,ತುಕಾರಾಮ್ ಗೌಡ,ಕಾಳಿ ಬ್ರಿಗೇಡ್ ಅಧ್ಯಕ್ಷ ರವಿ ರೇಡ್ಕರ್ ,ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.