ಕಾರವಾರ :- ನಾನು ಯಾವ ಪಕ್ಷಕ್ಕೂ ಟಿಕೆಟ್ ಕೇಳಲು ಹೋಗುವುದಿಲ್ಲ, ಮಾಜಿ ಸಚಿವರೊಬ್ಬರು ಎಂಟು ದಿನ ಕಾಯಿ ಎಂದಿದ್ದಾರೆ,ಬಿಜೆಪಿ ಬಿಟ್ಟಿರುವುದಕ್ಕೆ ನನಗೆ ಪಶ್ಚಾತಾಪವಿದೆ ಎಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಆನಂದ್ ಆಸ್ನೋಟಿಕರ್ ಹೇಳಿದರು.
ಇಂದು ಸಂಜೆ ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮುಂದಿನ ಚುನಾವಣೆಗೆ ಯಾವ ಪಕ್ಷದಿಂದ ಸ್ಪರ್ದಿಸಬೇಕೋ ಬೇಡವೇ ಅಥವಾ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದನ್ನು ತಿಂಗಳಿನಲ್ಲೇ ನಿರ್ದರಿಸುತ್ತೇನೆ. ಬಿಜೆಪಿ ಬಿಡಲು ಕೆಲವು ರಾಜಕೀಯ ನಿರ್ಧಾರ ನನ್ನಿಂದ ತಪ್ಪಾಗಿದೆ. ವೈಯಕ್ತಿಕ ಕಾರಣಗಳು ಹಾಗೂ ಅಂತಹ ವಾತಾವರಣದಿಂದ ಬಿಜೆಪಿ ಬಿಡುವಂತಾಯ್ತು.
ಇಂದು ಬಿಜೆಪಿ ನಾಯಕರ ಬೆಂಬಲದಿಂದ ಹಾಗೂ ಅವರ ಆಶಿರ್ವಾದದಿಂದ ನಾನು ಇಂದು ಇಲ್ಲಿದ್ದೇನೆ. ರಾಜಕೀಯ ಪ್ರಮುಖರು, ಸಂಸದ ಅನಂತ ಕುಮಾರ್ ಹೆಗಡೆಯವರನ್ನು ಕೂಡಾ ಬೇಟಿಯಾಗಿ ಆಶೀರ್ವಾದ ಪಡೆದುಕೊಂಡು ಮುಂದಿನ ಹೆಜ್ಜೆ ಇಡುತ್ತೇನೆ.ಒಂದು ತಿಂಗಳಲ್ಲಿ ನನ್ನ ರಾಜಕೀಯ ನಿರ್ದಾರ ತಿಳಿಸುತ್ತೇನೆ ಎಂದರು.
ನಮ್ಮ ಜಿಲ್ಲೆಗೆ ಅನ್ಯಾಯ ಆಗಲು ನಾನು ಸೇರಿ ಎಲ್ಲಾ ಪಕ್ಷದ ನಾಯಕರು ಕಾರಣರಾಗಿದ್ದಾರೆ. ಬಿಜೆಪಿಯವರು ಚುನಾವಣೆ ಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲಾಭ ಪಡೆದುಕೊಳ್ಳುತಿದ್ದಾರೆ,ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿಯಲ್ಲಿ ಮಾಡುತಿದ್ದಾರೆ.
ಸರ್ಕಾರ ಮನಸ್ಸು ಮಾಡಿದ್ರೆ ಎರಡು ತಿಂಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಬಹುದು ಆದರೇ ಸರ್ಕಾರ ಮೋಸ ಮಾಡುತ್ತಿದೆ. ಜಿಲ್ಲೆಗೆ ದೊಡ್ಡ ಅನ್ಯಾಯ ಮಾಡುತಿದ್ದಾರೆ ಎಂದರು.
ಕೇಸರಿ ಶಾಲು ತೊಟ್ಟು ಹಣಗೆ ಕುಂಕುಮ ಇಟ್ಟು ಬಂದ ಆಸ್ನೋಟಿಕರ್!
ಕಾರವಾರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಆನಂದ್ ಆಸ್ನೋಟಿಕರ್ ವಿಭಿನ್ನವಾಗಿ ಬಂದಿದ್ದರು. ಕೇಸರಿ ಶಾಲು ತೊಟ್ಟು ಹಣಗೆ ಕುಂಕುಮ ಇಟ್ಟು ಹಿಂದೂ ಕಾರ್ಯಕರ್ತನಂತೆ ಮಿಂಚಿದ್ದ ಅವರು ಬಿಜೆಪಿಯಲ್ಲಿ ರೂಪಾಲಿ ನಾಯ್ಕಗೇ ಟಿಕೇಟ್ ಸಿಗಲಿದೆ, ಕಾಂಗ್ರೆಸ್ ನಿಂದ ಸತೀಶ್ ಶೈಲ್ ಗೆ ಟಿಕೇಟ್ ನೀಡುತ್ತಾರೆ ನಾನು ಎರಡು ಪಕ್ಷದ ಆಕಾಂಕ್ಷಿಯಲ್ಲ ಎಂದು ಉಚ್ಚರಿಸಿದ ಅವರು ಚುನಾವಣೆಗೆ ಪಕ್ಷೇತರನಾಗಿ ನಿಲ್ಲುವ ಆಕಾಂಶೆಯನ್ನು ವ್ಯಕ್ತಪಡಿಸಿದ್ದು,ಒಂದುವೇಳೆ ಚುನಾವಣೆಗೆ ನಿಲ್ಲದಿದ್ದರೇ ಯಾವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದನ್ನು ಹಿರಿಯರ ಹಾಗೂ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ,ಮುಂದಿನ ತಿಂಗಳು ಪಾದಯಾತ್ರೆ ಮಾಡುತ್ತೇನೆ ಎಂದರು. ಇನ್ನು ಶಾಸಕಿ ರೂಪಾಲಿನಾಯ್ಕ ರವರು ಬ್ರಷ್ಟಾಚಾರ ಮಾಡುತಿದ್ದಾರೆ ಎಂದು ಆರೋಪಿಸಿದ ಅವರು ಶಾಸಕಿಯವರು ಕೋಟಿ ರುಪಾಯಿಯ ವಾಹನದಲ್ಲಿ ಓಡಾಡುತಿದ್ದಾರೆ ತಮ್ಮ ಆದಾಯದ ಮೂಲವನ್ನು ಸಂಪೂರ್ಣವಾಗಿ ಜನರಿಗೆ ನೀಡಲಿ, ಕೇವಲ ದುಡ್ಡು ಮಾಡಲು ರಾಜಕಾರಣ ಮಾಡುತಿದ್ದಾರೆ ಎಂದು ಆರೋಪಿಸಿದರು.
ಇನ್ನು ಕಾರವಾರದಲ್ಲಿ ಕೊಂಕಣಿ ನಾಮಫಲಕ ಅಳವಡಿಕೆ ವಿಚಾರವನ್ನು ಪ್ರಸ್ತಾಪಿಸಿದ ಅವರು ಕಾರವಾರದಲ್ಲಿ ಕೊಂಕಣಿ ಲಿಪಿಯನ್ನು ದೇವನಾಗರಿ ಲಿಪಿಯನ್ನು ಬರೆಯುವುದು ತಪ್ಪಲ್ಲ, ಸಂವಿಧಾನದ ಪ್ರಕಾರಫಲಕಗಳಿಗೆ ಕೊಂಕಣಿಯಲ್ಲಿ ಬರೆಯಬಹುದು. ನಾನು ಆಯ್ಕೆಯಾಗಿ ಬಂದಲ್ಲಿ ಕಾರವಾರದಲ್ಲಿ ದೇವನಾಗರಿ ಲಿಪಿಯಲ್ಲಿ ಕೊಂಕಣಿ ಫಲಕ ಬರೆಯಲು ಅವಕಾಶ ನೀಡುತ್ತೇನೆ.ಗಡಿಭಾಗವಾದ ಕಾರವಾರವನ್ನು ರಿಸರ್ವ್ಡ್ ಪ್ರದೇಶವೆಂದು ಘೋಷಿಸಿ ಸರ್ಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.