ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಹಸುಗಳಿಗೆ ಲಿಂಪಿ ಸ್ಕಿನ್ ರೋಗ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಜಿಲ್ಲೆ ಸುಮಾರು 111 ಜಾನುವಾರುಗಳು ಸಾವನ್ನಪ್ಪಿವೆ. ಒಟ್ಟು 434 ಹಳ್ಳಿಗಳಲ್ಲಿ 6,800ಕ್ಕೂ ಅಧಿಕ ಜಾನುವಾರುಗಳಲ್ಲಿ ಈ ಬಾಧೆ ಕಾಣಿಸಿಕೊಂಡಿದೆ. ಸದ್ಯ 1 ಸಾವಿರದಷ್ಟು ಜಾನುವಾರುಗಳು ಗುಣಮುಖವಾಗಿದ್ದು, ಲಕ್ಷದಷ್ಟು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.
ಇನ್ನು ಶಿರಸಿ,ಸಿದ್ದಾಪುರ ತಾಲೂಕಿನಲ್ಲೂ ಇದರ ಭಾದೆ ಹೆಚ್ಚಳವಾಗಿದ್ದು ರೋಗ ಹದಬದಿಗೆ ತರಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ನಾಟಿ ವೈದ್ಯಕೀಯ ಪದ್ಧತಿಯ ಪ್ರಯೋಗಕ್ಕೆ ಮುಂದಾಗಿದ್ದು ಕಾಡಿನಲ್ಲಿರುವ ಔಷಧೀಯ ಸಸ್ಯಗಳ ಪ್ರಯೋಗ ನಡೆಸುತಿದ್ದಾರೆ. ಆದರೇ ಇದೀಗ ಮಲೆನಾಡು ಭಾಗದ ಸಿದ್ದಾಪುರ,ಬನವಾಸಿ ಭಾಗದಲ್ಲಿ ಕೆಂಪಿರುವೆ ಚಟ್ನಿ ಮಾಡಿ ಗೋವುಗಳಿಗೆ ತಿನ್ನಿಸುವ ಮೂಲಕ ರೋಗವನ್ನು ತಹಬದಿಗೆ ತರಲು ಯಶಸ್ವಿಯಾಗಿದ್ದಾರೆ.
ಹೌದು ಚಿಕ್ಕಮಗಳೂರು ಭಾಗದಲ್ಲಿ ಕೆಲವು ಜನಾಂಗದವರು ಕೆಂಪು ಇರುವೆಗಳನ್ನು ತಂದು ಚಟ್ನಿ ಮಾಡಿ ತಿನ್ನುತ್ತಾರೆ. ಇದು ರೋಗ ನಿರೋಧಕ ಶಕ್ತಿ ಹಾಗೂ ದೇಹದ ಭಾವು, ಸಿಡುಬು,ಚರ್ಮರೋಗ ,ಗಂಟು ನೋವುಗಳನ್ನ ಗುಣಪಡಿಸುತ್ತವೆ ಎಂಬ ನಂಬಿಕೆ ಇದೆ.
ಹೀಗೆಯೇ ಇದೀಗ ಸಿದ್ದಾಪುರ ,ಬನವಾಸಿ ಭಾಗದಲ್ಲೂ ಸ್ಥಳೀಯ ಭಾಷೆಯಲ್ಲಿ ಹೇಳುವಂತೆ ಚಿಕಳಿ ( ಕೆಂಪು ಇರುವೆ )ಯ ಕೊಟ್ಟೆಗಳನ್ನು ತಂದು ಕೆಂಪು ಇರುವೆಗಳನ್ನು ಕಲ್ಲಿನಲ್ಲಿ ಅರೆದು ಅವುಗಳನ್ನು ಚಟ್ನಿ ಮಾಡಿ ಸ್ವಲ್ಪ ಉಪ್ಪನ್ನು ಬೆರಸಿ ರೋಗ ಬಾಧಿತ ಗೋವುಗಳಿಗೆ ದಿನಕ್ಕೆ ಎರಡುಬಾರಿ ನೀರಿನೊಂದಿಗೆ ಕುಡಿಸಬೇಕು.
ಹೀಗೆ ಒಂದು ವಾರದ ವರೆಗೆ ಮಾಡಿದರೇ ಲಿಂಪಿ ಸ್ಕಿನ್ ರೋಗ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಈ ಚಿಕಿತ್ಸೆಯ ಪ್ರಯೋಗ ಮಾಡಿ ಯಶಸ್ಸು ಕಂಡ ಸುರಕುಳಿಯ ರೈತ ಸುಭ್ರಾಯ್ ಗೌಡರು.
ಸದ್ಯ ಇದೇ ಪ್ರಯೋಗವನ್ನು ಶಿರಸಿ,ಸಿದ್ದಾಪುರ ಭಾಗದಲ್ಲಿ ಮಾಡಲಾಗುತಿದ್ದು ಹಸುವಿಗೆ ಅಂಟಿದ ಗಂಟು ರೋಗ ಗುಣಮುಖವಾಗುತ್ತಿದೆ.
ಇನ್ನು ಲಿಂಪಿ ಸ್ಕಿನ್ ರೋಗಕ್ಕೆ ತುತ್ತಾಗುವ ರಾಸುಗಳು ಮೊದಲು ಕಾಲುಬಾವು ಬಂದು ನಂತರ ದೇಹದ ಚರ್ಮಗಳಲ್ಲಿ ಗಂಟುಗಳು ಕಾಣಿಸಿಕೊಂಡು ಇಡೀ ದೇಹ ವ್ಯಾಪಿಸಿ ರಾಸು ಸಾಯುತ್ತದೆ. ಇದಲ್ಲದೇ ಈ ರೋಗ ಬೇರೆ ರಾಸುಗಳಿಗೂ ಹಬ್ಬುವುದರಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ರೆ ರೋಗ ಮತ್ತಷ್ಟು ಹಸುಗಳಿಗೆ ಹಬ್ಬಿ ಸಾವಿಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ರಾಸುಗಳನ್ನು ಬೇರ್ಪಡಿಸಿಟ್ಟಿ ಕೆಂಪು ಇರುವೆಯ ಚಟ್ನಿ ಮಾಡಿ ತಿನ್ನಿಸಿ ಗುಣಪಡಿಸಬಹುದು ಎಂಬುದು ಸ್ಥಳೀಯ ರೈತರ ಮಾತು.ಸದ್ಯ ಈ ಪ್ರಯೋಗ ಮಲೆನಾಡು ಭಾಗದಲ್ಲಿ ಯಶಸ್ಸು ಕಾಣುತಿದ್ದು ರೈತರ ಮುಗದಲ್ಲಿ ಮತ್ತೆ ಮಂದಹಾಸ ಮೂಡುವಂತೆ ಮಾಡಿದೆ.
