ಬೆಂಗಳೂರು:- ಅನಧಿಕೃತ ಸಾಗುವಳಿ ಭೂಮಿಯನ್ನು ಬಗರ್ ಹುಕುಂ ತಂತ್ರಾಂಶದ ಮೂಲಕ ಸಕ್ರಮಗೊಳಿಸುವ ಪಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ (Krishnabairegawda) ಸೂಚಿಸಿದ್ದಾರೆ. ಹೀಗಾಗಿ ಬಗರ್ ಹುಕುಂ ಸಾಗುವಳಿ ಪತ್ರ ನಿರೀಕ್ಷೆಯಲ್ಲಿದ್ದಂತ ರೈತರಿಗೆ ಶೀಘ್ರ ಹಕ್ಕುಪತ್ರ ದೊರೆಯುವ ಆಸೆ ಚಿಗುರುಗೊಂಡಿದೆ.
ವಿಕಾಸಸೌಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗಿನ ಸಭೆ ನಡೆಸಿದ ಸಚಿವರಿಗೆ ಬಗರ್ ಹುಕುಂ ತಂತ್ರಾಂಶದ ಬಳಕೆಯ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು. ಈ ವೇಳೆ ಸಾಗುವಳಿ ಭೂ ಪರಿಶೀಲನೆಗೆ ಬಗರ್ ಹುಕುಂ ತಂತ್ರಾಂಶವನ್ನು ಶೀಘ್ರ ಕಾರ್ಯಯೋಜನೆಗೊಳಿಸಬೇಕು ಎಂದು ಸಚಿವ ಕೃಷ್ಣಬೈರೇಗೌಡ ನಿರ್ದೇಶಿಸಿದರು.
ನಮೂನೆ ಸಂಖ್ಯೆ 50, 53 ಮತ್ತು 57 ಅರ್ಜಿಗಳನ್ನು ಸಲ್ಲಿಸೋ ಸಂಖ್ಯೆ ಹೆಚ್ಚಾಗುತ್ತಿದೆ. ಅವುಗಳನ್ನು ನ್ಯಾಯಯುತವಾಗಿ ವಿಲೇವಾರಿ ಮಾಡಬೇಕು. ಅನಧಿಕೃತವಾಗಿ ಸಾಗುವಳಿದಾರರು ಕೃಷಿಯಲ್ಲಿ ತೊಡಗಿದ್ದರೇ ಅಕ್ರಮ-ಸಕ್ರಮ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಇಲಾಖೆ ಬದ್ಧವಾಗಿದೆ ಎಂದರು.
ಇನ್ನೂ ಸಾವಿರಾರು ಎಕರೆ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದೆ. ಅದನ್ನ ನಿಯಂತ್ರಿಸಲೂ ನೂತನ ತಂತ್ರಾಂಶ ಆಪ್ ನಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಅವರು ಹೇಳಿದರು.