ಕಾರವಾರ:- ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ನಿಂದನಾತ್ಮಕವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ‘ಅವರು ನಮ್ಮ ಪಕ್ಷದವರಲ್ಲ’ ಎಂದಿದ್ದ ಬಿಜೆಪಿ ವಿರುದ್ಧ ಇದೀಗ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ:- ಕೆಪಿಸಿಸಿ ಅಧ್ಯಕ್ಷರಿಂದ ಬಿ ಫಾರಂ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಎ.16 ಕ್ಕೆ ನಾಮಪತ್ರ ಸಲ್ಲಿಕೆ.
ಬಿಜೆಪಿ ಕಾರ್ಯಕರ್ತ ಎನ್ನಲಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎನ್ನುವವರು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ಮರಾಠ ಜಾತಿಗೆ ನಿಂದಿಸಿ ಫೇಸ್ಬುಕ್ ನಲ್ಲಿ ಕಾಂಗ್ರೆಸ್ಸಿಗರ ಪೋಸ್ಟ್ ವೊಂದಕ್ಕೆ ಕಮೆಂಟ್ ಮಾಡಿದ್ದರು. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ ಅವರು ಪೊಲೀಸ್ ದೂರು ದಾಖಲಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
![](https://kannadavani.news/wp-content/uploads/2024/04/IMG-20240407-WA0148-841x1024.webp)
ಇದಕ್ಕೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಬಿಜೆಪಿ ವಕ್ತಾರರು, ಕಮೆಂಟ್ ಹಾಕಿದ್ದ ವ್ಯಕ್ತಿ ತಮ್ಮ ಪಕ್ಷದವನೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಗರಲ್ಲೇ ಇದೀಗ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ದೂರು ದಾಖಲಾದ ಕಾರ್ಯಕರ್ತನಿಗೆ ಧೈರ್ಯ ತುಂಬುವುದನ್ನ ಬಿಟ್ಟು ‘ನಮ್ಮವನಲ್ಲ’ ಎಂದು ಜಾರಿಕೊಂಡ ಬಿಜೆಪಿ ನಾಯಕರ ವರ್ತನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಟೀಕೆ ವ್ಯಕ್ತವಾಗಿದೆ.
![](https://kannadavani.news/wp-content/uploads/2024/04/IMG-20240407-WA0150-1024x986.webp)
‘ಕೇಸ್ ಆದ ಮೇಲೆ ಕರಿಮಣಿ ಮಾಲೀಕ ನಾನಲ್ಲ ಎನ್ನುವ ಮುಖಂಡರ ಬಗ್ಗೆ ಎಚ್ಚರ ವಹಿಸಿ’ ಎಂಬ ಬಿಜೆಪಿ ಕಾರ್ಯಕರ್ತರ ಪೋಸ್ಟ್ ಗಳು ಇದೀಗ ಎಲ್ಲೆಡೆ ವೈರಲ್ ಆಗತೊಡಗಿವೆ.