ಬೆಂಗಳೂರು : ರಾಜ್ಯದ ಸಾವಿರಾರು ರೈತರು ನಮೂನೆ 50, 53 ಮತ್ತು 57ರಡಿಯಲ್ಲಿ ಬಗರ್ ಹುಕಂ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ರಾಜ್ಯ ಸರ್ಕಾರ ಸುತ್ತೋಲೆ ಮೂಲಕ ಆದೇಶಿಸಿದೆ. ಹೀಗಾಗಿ ಶೀಘ್ರವೇ ಬಗರ್ ಹುಕುಂ ಮೂಲಕ, ರೈತರಿಗೆ ಜಮೀನು ಮಂಜೂರಾಗಲಿದೆ.
ಈ ಕುರಿತಂತೆ ಕಂದಾಯ ಇಲಾಖೆ(ಭೂ ಮಂಜೂರಾತಿ-1)ಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಬಲರಾಮ್, ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಥಿಕಾರಿಗಳು, ಭೂಮಾಪನ ಇಲಾಖೆಯ ಆಯುಕ್ತರು, ಪದನಿಮಿತ್ತ ನಿರ್ದೇಶಕರುಗಳಿಗೆ ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 94-ಎ, 94-ಬಿ ಮತ್ತು 94-ಎ(4)ರ ಅಡಿಯಲ್ಲಿ ಕಲ್ಪಿಸಿರುವ ಅವಕಾಶದನ್ವಯ ನಮೂನೆ 50, 53 ಮತ್ತು 57ರಡಿಯಲ್ಲಿ ಸ್ವೀಕರಿಸಿರುವ ಅರ್ಜಿಗಳ ಪೈಕಿ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೇ ಗಮನಾರ್ಹ ಪ್ರಮಾಣದಲ್ಲಿ ತಾಲ್ಲೂಕು ಹಂತದಲ್ಲಿ ಬಗರ್ ಹುಕುಂ ಸಮಿತಿಗಳ ಮುಂದೆ ಬಾಕಿ ಇವೆ. ಇವುಗಳ ಪೈಕಿ ಮಂಜೂರಾತಿಗೆ ಅರ್ಹವಿಲ್ಲದ ಅರ್ಜಿಗಳು ಬಾಕಿ ಇರಿಸಿರುವುದು ಸಹ ಸರ್ಕಾರದ ಗಮನಕ್ಕೆ ಬಂದಿದೆ.
ಇದಲ್ಲದೇ ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನಮೂನೆ 50, 53 ಮತ್ತು 57ರ ಅರ್ಜಿಗಳು ಸಾಕಷ್ಟು ಬಾಕಿ ಇರುವುದರಿಂದ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತೆರವುಗೊಳಿಸುವುದು ಸಾಧ್ಯವಾಗಿರುವುದಿಲ್ಲ. ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿಯ ಪ್ರಕರಣದಲ್ಲಿ ನ್ಯಾಯಾಲಯವು ಬಗರ್ ಹುಕುಂ ಸಮಿತಿಗಳು ಅರ್ಜಿಗಳನ್ನು ಇತ್ಯರ್ಥ ಮಾಡದೇ ಬಾಕಿ ಇರುವುದನ್ನು ಗಂಭೀರವಾಗಿ ಪರಿಗಣಿಸಿರುತ್ತದೆ.
ಈ ಕೆಳಗಿನ ಕೋಷ್ಟಕದ ಅಂಕಣ-2ರಲ್ಲಿ ತೋರಿಸಿದ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ವ್ಯಾಪ್ತಿಯ ಸರಹದ್ದಿನಿಂದ ಕೋಷ್ಟಕದ ಅಂಕಣ 3ರಲ್ಲಿ ನಮೂದಿಸಿರುವ ನಿರ್ಬಂಧಿತ ಅಂತರದಲ್ಲಿ ಬರುವ ಜಮೀನಿನ ಅನಧಿಕೃತ ಸಾಗುವಳಿಯ ಸಕ್ರಮಗೊಳಿಸುವುದನ್ನು ನಿರ್ಬಂಧಿಸಲಾಗಿರುತ್ತದೆ.
![](https://kannadavani.news/wp-content/uploads/2021/01/TextMaster_01-31-09.23.18-791x1024.jpeg)
![](https://kannadavani.news/wp-content/uploads/2021/01/TextMaster_01-31-09.17.20-791x1024.jpeg)
ಈಗಾಗಲೇ ಸ್ವೀಕೃತವಾಗಿರುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಬಾಕಿ ಇರುವ ನಮೂನೆ 50, 53 ಮತ್ತು 57ರಡಿಯಲ್ಲಿ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳನ್ನು ಶೀಘ್ರವಾಗಿ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡತಕ್ಕದ್ದು.
ಜಿಲ್ಲಾಧಿಕಾರಿಗಳು ಅನರ್ಹ ಅರ್ಜಿಗಳನ್ನು ಕೂಡಲೇ ತಿರಸ್ಕರಿಸಿ ಸದರಿ ಅರ್ಜಿಯಲ್ಲಿ ಕೋರಿರುವ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಳ್ಳಲು ನಿಯಮಾನುಸಾರ ಅಗತ್ಯ ಕ್ರಮ ವಹಿಸತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ. ಹೀಗಾಗಿ ರಾಜ್ಯದ ರೈತರು ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿ ಅನೇಕ ವರ್ಷದಿಂದ ಕಾಯುತ್ತಿರುವವರಿಗೆ ಜಮೀನು ಮಂಜೂರಾಗಲಿದೆ.
ಕನ್ನಡವಾಣಿ ವೆಬ್ ನ್ಯೂಸ್ ಅನ್ನು ಉಚಿತವಾಗಿ ವಾಟ್ಸ್ ಅಪ್ ಮೂಲಕ ಸುದ್ದಿ ಪೇಯಲು ಕೆಳಗಿನ ಲಿಂಕ್ ಬಳಸಿ ಗ್ರೂಪ್ ಗೆ ಸೇರಿ.