ಕಾರವಾರ :- ಮದುವೆ ಮಂಟಪವಿಲ್ಲ, ಆಡಂಬರದ ಓಲಗವಿಲ್ಲ,ಪುರೋಹಿತರ ಮಂತ್ರಘೋಷವಿಲ್ಲದೇ ಮಾವಿನ ಮರದ ಕೆಳಗೆ ವಿಶೇಷ ರೀತಿಯಲ್ಲಿ ವಿವಾಹವಾಗುವ ಮೂಲಕ ಜೋಡಿಯೊಂದು ಎಲ್ಲರ ಗಮನ ಸೆಳೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅಂಗಡಿಬೈಲಿನ ಆತ್ಮೀಯ ಹಾಗೂ ಮಾಧವಿ ಎಂಬುವವರೇ ಈ ವಿಶೇಷ ರೀತಿಯಲ್ಲಿ ವಿವಾಹವಾದವರಾಗಿದ್ದು ಕುಮೆಂಪು ರವರ ಆದರ್ಶದಂತೆ ಮಂತ್ರ ಮಾಂಗಲ್ಯ ರೀತಿಯಲ್ಲಿ ವಿವಾಹವಾಗಿದ್ದಾರೆ.
ಹೇಗಿತ್ತು ವಿವಾಹ.


ಕುಮೆಂಪು ರವರ ಆದರ್ಶದಂತೆ ಮಂತ್ರ ಮಾಂಗಲ್ಯ ವಿವಾಹ ಇದಾಗಿತ್ತು. ಆದರೇ ಮಂತ್ರ ಘೋಷದ ಬದಲು ಮದುವೆ ಮಂಟಪದಲ್ಲಿ ಜನಪದ ಹಾಡುಗಳು ಕೇಳಿಬಂದವು.
ವಿವಾಹ ಸಂಹಿತೆಯನ್ನು ಕನ್ನಡದಲ್ಲಿ ಅಕ್ಷತಾ ಕೃಷ್ಣಮೂರ್ತಿ, ಇಂಗ್ಲಿಷ್ ನಲ್ಲಿ ಶರಣ್ಯಾ, ಮರಾಠಿಯಲ್ಲಿ ಅಕ್ಷತಾ ರಾವ್ ಓದುವ ಮೂಲಕ ಮಹಿಳೆಯರೇ ವಿವಾಹದ ಪುರೊಹಿತ್ಯವನ್ನು ವಹಿಸಿದ್ದರು.
ಯಾವುದೇ ಆಧುನಿಕತೆ ಬಳಸದೇ ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ಮದುವೆ ಮನೆಯಲ್ಲಿ ಬಳಸಲಾಗಿತ್ತು.ಇಪ್ಪಿ ಹೂವಿನ ಮಾಲೆಯನ್ನು ಬದಲಾಯಿಸಿಕೊಂಡ ವರ, ವಧು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.
ಬಂದ ಬೀಗರ ಊಟಕ್ಕೂ ಹುರಿಯಕ್ಕಿ ಲಾಡು, ಕಬ್ಬಿನಹಾಲು, ಗ್ರಾಮೀಣ ಪ್ರದೇಶದ ಅಡುಗೆಯೇ ಈ ಮದುವೆಯ ವಿಶೇಷವಾಗಿದ್ದು ಎಲ್ಲರ ಗಮನ ಸೆಳೆಯಿತು.
ಆಧುನಿಕತೆಯ ಈ ಕಾಲದಲ್ಲಿ ವೈಭವೀಕೃತವಾಗಿ ಮದುವೆಗಳು ಜರುಗುತ್ತವೆ. ಆದರೇ ಈ ಮದುವೆ ಪರಿಸೆಕ್ಕೆ ಪೂರಕವಾಗಿದ್ದು , ಮನೆಯ ಮುಂದಿರುವ ಮಾವಿನ ಮರವೇ ಮಂಟಪವಾಗಿತ್ತು. ಪ್ಲಾಸ್ಟಿಕ್ ಸಂಪೂರ್ಣ ದೂರ ಇಡುವ ಜೊತೆ ಗಿಡಮರಗಳ ನಡುವೆ ಮದುವೆ ಜರುಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಯಿತು.