![](https://kannadavani.news/wp-content/uploads/2021/02/TextMaster_02-05-10.51.28-1024x722.png)
ಸ್ವಾತಂತ್ರ ಹೋರಾಟದಲ್ಲಿ ಉತ್ತರ ಕನ್ನಡ ಜಿಲ್ಲೆ ತನ್ನದೇ ಆದ ಕೊಡುಗೆ ನೀಡಿದೆ. ಅದ್ರಲ್ಲೂ,ಕ್ರಿ.ಶ 1800 ರ ಅವಧಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಶಿರಸಿ ಭಾಗದ ಸೋಂದಾ ಹಾಗೂ ಬಿಳಗಿ ಅರಸರ ಬಗ್ಗೆ ಇತಿಹಾಸ ಪುಟಗಳಲ್ಲಿ ಹೆಚ್ಚು ಉಲ್ಲೇಕವೇ ಇಲ್ಲ.
ಈ ಕುರಿತು ಇಂದು ನಮ್ಮ ನೆಲದ ಕಥೆಯಲ್ಲಿ ಇತಿಹಾಸ ತಜ್ಞ ಲಕ್ಷ್ಮೀಶ್ ಸೋಂದಾ ರವರು ಒಂದಿಷ್ಟು ಬೆಳಕು ಚಲ್ಲಿದ್ದಾರೆ. ಹಾಗಿದ್ರೆ ಸೋಂದಾ,ಬಿಳಗಿ ಅರಸರ ಸ್ವತಂತ್ರ ಹೋರಾಟದ ಬಗ್ಗೆ ಇಂದು ತಿಳಿಯೋಣ.
ಅದು ಕ್ರಿ.ಶ ೧೮೦೦ ರ ಸಮಯ,ಕರ್ನಾಟಕವನ್ನೊಳಗೊಂಡು ಭಾರತದಲ್ಲಿ ಬ್ರಿಟಿಶ್ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದ ಕಾಲ.
ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದು ಸ್ವಲ್ಪ ತೀವ್ರವೇ ಆಗಿತ್ತು,ಇದನ್ನು ಕೆಲವರು ” ದಕ್ಷಿಣ ಭಾರತದ ದಂಗೆ ” ಎಂದೂ ಕರೆದರು,ದಕ್ಷಿಣ ಭಾರತದಲ್ಲೂ ವಿಶೇಷವಾಗಿ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಾವು ಸ್ವಲ್ಪ ಹೆಚ್ಚೇ ಇತ್ತು.
![](https://kannadavani.news/wp-content/uploads/2021/02/IMG_20210215_023121.jpg)
ಕರ್ನಾಟಕದಲ್ಲಿ ಆ ಸಂದರ್ಭದಲ್ಲಿ ಈ ಚಟುವಟಿಕೆಯ ನಾಯಕತ್ವ ವಹಿಸಿದ್ದು ಚನ್ನಗಿರಿಯ ದೋಂಡಿಯಾ ವಾಘ್,ಶಿಕಾರಿಪುರದಿಂದ ವಿದ್ಯುಕ್ತವಾಗಿ ಹೋರಾಟಕ್ಕೆ ಆರಂಭ ಸಿಕ್ಕಿತ್ತು.
ಅದೇ ಸಂದರ್ಭದಲ್ಲಿ, ಅಂದರೆ 1800-1810 ರಲ್ಲಿ ನಮ್ಮ ಈಗಿನ ಉತ್ತರ ಕನ್ನಡದ ಬನವಾಸಿ,ಸೋಂದಾ,ಬಿಳಗಿ,ಬದನಗೋಡ್,ಅಂಕೋಲಾಗಳಲ್ಲಿ ಇದರ ಕಾವು ಹೆಚ್ಚಾಗಿತ್ತು.
ಅಂದು ಮಂಗಳೂರು ಮತ್ತು ಶಿಕಾರಿಪುರಗಳಿಂದ ಒಂದಿಷ್ಟು ಕ್ರಾಂತಿಕಾರಿಗಳು ಬನವಾಸಿಗೆ ಬಂದು ಸ್ಥಳೀಯರ ಹೋರಾಟದಲ್ಲಿ ಕೈಸೇರಿಸಿದರು.
ಬನವಾಸಿಯನ್ನು ಬ್ರಿಟಿಷರಿಂದ ವಶಪಡಿಸಿಕೊಂಡು,ಬ್ರಿಟಿಷರ ಅಂಗಡಿಗಳನ್ನ ಮುತ್ತಿ ಅಲ್ಲಿ ಸಂಗ್ರಹಿಸಿದ್ದ ಕಾಳುಮೆಣಸನ್ನ ವಶಪಡಿಸಿಕೊಂಡರು.
![](https://kannadavani.news/wp-content/uploads/2021/02/TextMaster_02-15-02.36.03-1024x683.jpeg)
ಅಂಕೋಲಾದಿಂದ ಬಂದ ಮತ್ತೊಂದು ಗುಂಪು ಬಿಳಗಿಗೆ ಹೋಗಿ ಅಲ್ಲಿನ ಸ್ಥಳೀಯರ ಜೊತೆ ಸೇರಿ ಬ್ರಿಟಿಷರನ್ನು ವಿರೋಧಿಸತೊಡಗಿದ್ದರು.
ಆ ಸಂದರ್ಭದಲ್ಲಿ ಬಿಳಗಿ ಅರಸುಮನೆತನ ಪತನವಾಗಿದ್ದರೂ, ಆ ವಂಶದ ರಾಜಕುಮಾರ ಬಿಳಗಿಯ ಹೋರಾಟದ ನೇತೃತ್ವವಹಿಸಿದ್ದ.
![](https://kannadavani.news/wp-content/uploads/2021/02/IMG-20210214-WA0002.jpg)
ಅಷ್ಟೇ ಅಲ್ಲ ಆತ ಸ್ವಾತಂತ್ರ್ಯವನ್ನೂ ಘೋಷಿಸಿಕೊಂಡಿದ್ದ. ಅದೇ ರೀತಿ ಸೋಂದಾದಲ್ಲೂ ಅರಸುವಂಶದ ರಾಜಕುಮಾರನ ನೇತೃತ್ವದಲ್ಲಿ ಹೋರಾಟ ನಡೆದಿತ್ತು, ಆದರೆ ಈ ಹೊತ್ತಿಗೆ ಕರ್ನಾಟಕದ ದಂಗೆಯ ನೇತೃತ್ವ ವಹಿಸಿದ್ದ ದೋಂಡಿಯಾ ವಾಘ್ ನ ಮರಣ, ಹೋರಾಟದ ಕಾವನ್ನು ತಣ್ಣಗಾಗಿಸಿಬಿಟ್ಟಿತು.
ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಅರಸು ಮನೆತನಗಳಾದ ಸೋಂದಾ ಅರಸರು ಮತ್ತು ಬಿಳಗಿ ಅರಸರು, ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಾಗಿ ಹೋರಾಡಿದರು.
ಆದರೇ ಈ ವಿಷಯವೀಗ ಇತಿಹಾಸದ ಹರಿದ ಪುಟದಲ್ಲಿ ಸೇರಿಹೋಗಿದೆ.
ಈ ಅಪರೂಪದ ಸಂಗತಿ ಪಠ್ಯದಲ್ಲಿ ಬರದೇ ಹೋದದ್ದು ದುರದೃಷ್ಟಕರ. ನಮ್ಮ ಅರಸರು ನಮ್ಮ ಹೆಮ್ಮೆ.
ಲೇಖನ:- ಲಕ್ಷ್ಮೀಶ್ ಸೋಂದಾ. ಇತಿಹಾಸ ತಜ್ಞ.