ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮದಲ್ಲಿ ಶನಿವಾರ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲವೊಂದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಿಮಿಂಗಿಲವು ಸುಮಾರು 35 ಮೀ. ಉದ್ದವಿತ್ತು. ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹವಿದೆ. ಮೃತಪಟ್ಟು ಹಲವು ದಿನ ಕಳೆದಿರುವ ಸಾಧ್ಯತೆ ಇದ್ದು ಅಲೆಗಳ ರಭಸಕ್ಕೆ ಈಗ ದಡಕ್ಕೆ ಬಂದು ಬಿದ್ದಿದೆ. ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ.
ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಸಂತಾನೋತ್ಪತ್ತಿ ವೇಳೆ ಈ ತಿಮಿಂಗಿಲಗಳು ಬರುತ್ತವೆ. ನೇತ್ರಾಣಿ ದ್ವೀಪ, ಮುಗಳಿ ಕಡಲಧಾಮದ ಬಳಿ ವಲಸೆ ಬರುವುದು ಹೆಚ್ಚು. ಶಾರ್ಕ್ ಮೀನುಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆಯೂ ಇರಬಹುದು ಎಂದು ಕಡಲಜೀವಶಾಸ್ತ್ರ ಸಂಶೋಧಕ ಪ್ರಕಾಶ ಮೇಸ್ತ ಹೇಳಿದರು.