ಮಂಗಳೂರು:ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳನ್ನು ಮಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಗಳೂರಿನ ಎರಡು ಲಾಡ್ಜ್ ಹಾಗೂ ಎರಡು ಮನೆಗಳಲ್ಲಿ ತಂಗಿದ್ದ 38 ಮಂದಿ ಶ್ರೀಲಂಕಾ ನುಸುಳುಕೋರರನ್ನು ಬಂಧಿಸಿ ಇವರನ್ನು ಶ್ರೀಲಂಕಾದಲ್ಲಿನ ಎಜೆಂಟ್ ಒಬ್ಬ ಕೆನಡಾ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಶ್ರೀಲಂಕಾದಿಂದ ಮಾರ್ಚ್ 17ರಂದು ಬೋಟ್ ಮೂಲಕ ತಮಿಳುನಾಡು ರಾಜ್ಯದ ತೂತುಕುಡಿಗೆ ಕಳುಹಿಸಿಕೊಟ್ಟಿದ್ದ.

ಆದ್ರೆ ಆ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಚುನಾವಣೆಯಿದ್ದುದರಿಂದ ಸಿಕ್ಕಿಹಾಕಿಕೊಳ್ಳುವ ಭಯದಲ್ಲಿ ತಾತ್ಕಾಲಿಕವಾಗಿ ಅವರನ್ನು ಅಲ್ಲಿಂದ ಮಥುರೈ, ಸೇಲಮ್, ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.
ಈ ಬಗ್ಗೆ ತಮಿಳುನಾಡು ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ
ಇವರಲ್ಲಿ ಬಹುತೇಕ ಮಂದಿ ಶ್ರೀಲಂಕಾದ ಉತ್ತರ ಭಾಗದವರಾಗಿದ್ದು,38 ಜನರಿಂದಲೂ ಶ್ರೀಲಂಕಾದ ಎಜೆಂಟ್ ತಲಾ 5 ಲಕ್ಷದಿಂದ 10 ಲಕ್ಷ ಮೌಲ್ಯದ ಶ್ರೀಲಂಕನ್ ಕರೆನ್ಸಿ ಪಡೆದುಕೊಂಡಿದ್ದ.
ಇವರನ್ನು ತಮಿಳುನಾಡಿನ ತೂತುಕುಡಿಯಿಂದಲೇ ಕಾರ್ಗೂ ಶಿಪ್, ಖಾಸಗಿ ಬೋಟ್ ಮೂಲಕವೇ ಕೆನಾಡಕ್ಕೆ ಕಳುಹಿಸುವ ಬಗ್ಗೆ ಪ್ಲ್ಯಾನ್ ಆಗಿತ್ತು. ಆದ್ರೆ ಅದು ಆಗದೇ ಇದ್ದುದರಿಂದ ತಾತ್ಕಾಲಿಕವಾಗಿ ಅವರನ್ನು ಮಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಈ ಮಾನವ ಕಳ್ಳ ಸಾಗಾಣೆಯಲ್ಲಿ ಇರುವ ಎಜೆಂಟ್ ಹಾಗೂ ಈ ಲಿಂಕ್ನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.
ಮಾನವ ಕಳ್ಳ ಸಾಗಾಣಿಕೆಯ ಜೊತೆ ಫಾರಿನರ್ಸ್ ಆ್ಯಕ್ಟ್, ಪಾಸ್ಪೋರ್ಟ್ ಆ್ಯಕ್ಟ್ ಅಡಿಯೂ ಪ್ರಕರಣ ದಾಖಲಾಗಿದೆ. ಮಂಗಳೂರಿನಲ್ಲಿ ಇವರಿಗೆ ಆಶ್ರಯ ನೀಡಿದ ಸ್ಥಳೀಯ ಆರು ಜನರನ್ನು ಸಹ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.