ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಆಂದ್ಲೆ ಗ್ರಾಮದ ವೃದ್ಧ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ನಗ, ನಗದು ದೋಚಿದವರನ್ನು ಕಾರವಾರದ ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಮಂಗಳವಾರ ಅಪರಾಧಿಗಳು ಎಂದು ಪರಿಗಣಿಸಿ, ಜೀವಾವಧಿ ಜೈಲು ಶಿಕ್ಷೆ ಹಾಗೂ ತಲಾ 2.70. ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆಂದ್ಲೆ ಗ್ರಾಮದ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ನಾರಾಯಣ ಬೊಮ್ಮಯ್ಯ ನಾಯಕ ಹಾಗೂ ಸಾವಿತ್ರಿ ನಾಯಕ ಎಂಬ ದಂಪತಿಯನ್ನು 2019 ರ ಡಿಸೆಂಬರ್ 20 ರ ರಾತ್ರಿ ಕಾಲು ಕಟ್ಟಿ ಹಾಕಿ ಆಯುಧಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೃತರ ತಮ್ಮನ ಮಗ ಅದೇ ಗ್ರಾಮದ ಸುಖೇಶ ಕುಮಾರ್, ಬೆಂಗಳೂರಿನ ವೆಂಕಟರಾಜು, ನಾಗಣ್ಣ, ಭರತಕುಮಾರ್ ಎಂಬುವವರನ್ನು ಅಂಕೋಲಾ ಠಾಣೆ ಪೊಲೀಸರು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನೂ ಓದಿ:-Exclusive-ಅಂಕೋಲ ಕಡಲತೀರದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ‘ತಾಂಡೇಲ್’ ಚಿತ್ರೀಕರಣ
ಮೊಬೈಲ್ ಲೊಕೇಶನ್, ಸಿಸಿ ಕ್ಯಾಮರಾ ಫುಟೇಜ್ ಸೇರಿ 57 ಸಾಕ್ಷ್ಯಗಳನ್ನು ಪರಿಶೀಲನೆ, ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರು ನಾಲ್ವರನ್ನು ಅಪರಾಧಿಗಳು ಎಂದು ಪರಿಗಣಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಶಿವಪ್ರಸಾದ್ ಆಳ್ವಾ, ಕಾರವಾರ ಪಬ್ಲಿಕ್ ಪ್ರಾಸಿಕ್ಯೂಟರ್ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು. ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಹಾಗೂ ತಂಡ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.
ಹಣದ ಆಸೆಗೆ ದೊಡ್ಡಪ್ಪನನ್ನೇವ ಕೊಂದ ದುರುಳ
ಹಣಕ್ಕಾಗಿ ವೃದ್ಧ ದಂಪತಿಯನ್ನು ಅವರ ಸಹೋದರನ ಪುತ್ರನೇ ಕೊಲೆ ಮಾಡಿಸಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿತ್ತು. ಮೃತ ನಾರಾಯಣ ಬೊಮ್ಮಯ್ಯ ನಾಯಕ ಅವರ ಸಹೋದರ ಚಂದ್ರು ನಾಯಕ ಅವರ ಮಗ ಸುಖೇಶಕುಮಾರ್ ಬೆಂಗಳೂರಿನಲ್ಲಿದ್ದ. ಜೂಜಿನಾಟಕ್ಕೆ ಬಿದ್ದಿದ್ದ ಆತನಿಗೆ ಹಣದ ಅಡಚಣೆ ಇತ್ತು. ಇದರಿಂದ ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟರಾಜು ಜತೆ ಸೇರಿ ದರೋಡೆಯ ಯೋಜನೆ ರೂಪಿಸಿದ್ದ. ವೆಂಕಟರಾಜು ಸ್ನೇಹಿತರಾದ ನಾಗಣ್ಣ ಹಾಗೂ ಭರತಕುಮಾರ್ ಈ ಕೃತ್ಯಕ್ಕೆ ಕೈ ಜೋಡಿಸಿದ್ದರು.
ಇದನ್ನೂ ಓದಿ:-Uttrakannada: ಅಂಗನವಾಡಿ ಕಾರ್ಯಕರ್ತರಿಗೆ ಹರಿದ ಸೀರೆಯೇ ಗತಿ! ಸೀರೆಗೆ ಹಣ ನೀಡುವುದರಲ್ಲೂ ನಿರ್ಲಕ್ಷ ತೋರಿದ ಕೇಂದ್ರಸರ್ಕಾರ!
ಬೆಂಗಳೂರಿನಿಂದ ಕಾರಿನಲ್ಲಿ ಬಂದ ನಾಲ್ವರು ಮಧ್ಯ ರಾತ್ರಿಯಲ್ಲಿ ಮನೆಗೆ ನುಗ್ಗಿ ಇಬ್ಬರು ವೃದ್ಧರ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿ, 1.50 ಲಕ್ಷ ರೂ. ನಗದು, ಹಾಗೂ ಸುಮಾರು 120.48 ಗ್ರಾಂ ತೂಕದ ಬಂಗಾರದ ಆಭರಣ, ನಾಣ್ಯಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಹೆದರಿ ಸಿಕ್ಕಿ ಬಿದ್ದ!
ಮೃತರ ಶ್ರಾದ್ಧದ ದಿನ ಪೊಲೀಸರು ಮನೆಯವರೆಲ್ಲರ ವಿಚಾರಣೆ ನಡೆಸಿದ್ದರು. ಇದರಿಂದ ಹೆದರಿದ ಸುಖೇಶ ಕುಮಾರ ನಾಯಕ ಅಲ್ಲಿಂದ ಪರಾರಿಯಾಗಿದ್ದ. ಸಂಬಂಧಿಕರ ಮನೆಯಲ್ಲಿ ಬೈಕ್ ನಿಲ್ಲಿಸಿ, ಯಾರಿಗೂ ಹೇಳದೇ ನಾಪತ್ತೆಯಾಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದರು. ಸುಖೇಶ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದುವಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, 2020 ರ ಜನವರಿ 6 ರಂದು ಊರಿನ ಸಮೀಪವೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಇತರರ ವಿಚಾರ ಬಾಯಿ ಬಿಟ್ಟಿದ್ದು, ಎಲ್ಲರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅಂಕೋಲ ಪೊಲೀಸರ ದಕ್ಷ ತನಿಖೆಯಿಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
Webstory