ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ-ಅವರ ಜೀವನ ಹೇಗಿತ್ತು ಗೊತ್ತಾ?.
ಹಾಸನ (Hassan) ಜಿಲ್ಲೆಯ ಹರದನಹಳ್ಳಿಯ ಮಾವಿನಕೆರೆ ರಂಗನಾಥ ಸ್ವಾಮಿ ಬೆಟ್ಟದ (Ranganathaswamy Hill) ತಪ್ಪಲಿನಲ್ಲಿರುವ ಪುಣ್ಯಭೂಮಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ (H.D Devegowda) ಪತ್ನಿ ಚೆನ್ನಮ್ಮನವರ (89) (Chennamma) ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ಪತಿ ಊರು ಹಾಗೂ ಅವರ ಹುಟ್ಟೂರಿನ ಸಮೀಪದ ದೈವ ಸನ್ನಿಧಿ ಸಮೀಪವೇ ಸೋಮವಾರ (ಜು.19) ಮಧ್ಯಾಹ್ನದ ಒಳಗೆ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗುತ್ತಿದೆ.
ಉಸಿರಾಟದ ಸಮಸ್ಯೆಯಿಂದಾಗಿ ಕಳೆದ 3 ದಿನಗಳ ಹಿಂದೆ ಹೆಚ್ಎಎಲ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಚೆನ್ನಮ್ಮ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇವತ್ತು ಸಂಜೆ 4 ಗಂಟೆ 50 ನಿಮಿಷ ಸುಮಾರಿಗೆ ಹೃದಯಸ್ತಂಭನವಾಗಿದ್ದು, ಅವರು ನಿಧನರಾಗಿದ್ದಾರೆ.

ಇದನ್ನೂ ಓದಿ:-Karwar|ಅರಣ್ಯ ಇಲಾಖೆಯಲ್ಲಿ ಮೇಜರ್ ಸರ್ಜರಿ-ಉತ್ತರ ಕನ್ನಡ ಜಿಲ್ಲೆಯ 19 RFOಗಳ ವರ್ಗಾವಣೆ
ಪತ್ನಿ ನಿಧನ ಸುದ್ದಿ ತಿಳಿಯುತ್ತಿದ್ದಂತೆಯೇ ದೇವೇಗೌಡರು ಕಣ್ಣೀರು ಹಾಕಿದ್ದಾರೆ. ನಾಲ್ಕೈದು ಗಂಟೆ ಅವರ ಬಳಿಯೇ ಕೂತಿದ್ದರು. ಪತ್ನಿಯ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸಿ ಮುಖವನ್ನೇ ನೋಡುತ್ತಾ ಭಾವುಕರಾದರು. ದೇವೇಗೌಡರು ಪ್ರಧಾನಿ ಆಗಲು ಚೆನ್ನಮ್ಮ ಕೊಡುಗೆ ಅಪಾರವಾಗಿತ್ತು. ಕುಮಾರಸ್ವಾಮಿ, ನಿಖಿಲ್ ಕೂಡ ಭಾವುಕರಾಗಿದ್ದಾರೆ. ಕುಮಾರಸ್ವಾಮಿ, ರೇವಣ್ಣ ಸೇರಿದಂತೆ 6 ಮಕ್ಕಳಿಗೆ ಚೆನ್ನಮ್ಮ ಜನ್ಮ ನೀಡಿದ್ದರು. ಇನ್ನು, ನಿನ್ನೆ (ಜು.17) ಇಡೀರಾತ್ರಿ ಸೊಸೆ ಭವಾನಿ ರೇವಣ್ಣ ಅವರು ಆಸ್ಪತ್ರೆಯಲ್ಲೇ ಉಳಿದು ಅತ್ತೆಯ ಆರೋಗ್ಯ ನೋಡಿಕೊಂಡಿದ್ದರು. ಈಗ ದೊಡ್ಡಗೌಡರ ಮನೆಯಲ್ಲಿ ಸೂತಕ ಆವರಿಸಿದೆ.
ದೇವೇಗೌಡರ ಬಳಿ 1,000 ರೂಪಾಯಿ ಕೊರತೆಯಾದಾಗ ಒಡವೆ ಗಿರವಿ ಇಟ್ಟಿದ್ದ ಚೆನ್ನಮ್ಮ!.

1954ರ ಮೇ 25 ರಂದು ಹಿರೇಹಳ್ಳಿಯಲ್ಲಿ ವಿವಾಹವಾದ ಬಳಿಕ ಗೌಡರ ವ್ಯಾಪಾರ ವಹಿವಾಟಿನ ಅಗತ್ಯಗಳಿಗೆ ಚೆನ್ನಮ್ಮ ಒತ್ತಾಸೆಯಾಗಿ ನಿಲ್ಲುವ ಮೂಲಕ ನವ ದಂಪತಿಗಳು ತಮ್ಮ ವೈವಾಹಿಕ ಜೀವನ ಪ್ರಾರಂಭಿಸಿದರು.
ಮದುವೆಯಾಗಿ ಒಂದು ವರ್ಷದಲ್ಲಿ ಅವರಿಗೆ ಒಂದು ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ದೇವೇಗೌಡರು ಕೈಗೊಳ್ಳಲು ಇಚ್ಛಿಸಿದ್ದ ಒಂದು ಸಿವಿಲ್ ಕಾಮಗಾರಿ ಕೆಲಸದ ಟೆಂಡರ್ ಪಡೆಯಲು ಅಗತ್ಯವಾದ ಠೇವಣಿ ಇಡಲು ಅವರಿಗೆ 1 ಸಾವಿರ ರೂಪಾಯಿಗಳ ಕೊರತೆ ಬೀಳುತ್ತದೆ. ಗಡುವು ಹತ್ತಿರವಾಗುತ್ತಿದ್ದರೂ ಹಣ ಹೊಂದಿಸಲು ಗೌಡರಿಗೆ ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಚೆನ್ನಮ್ಮ ಮೊಸಳೆ ಹಿರೇಹಳ್ಳಿಯ ತಮ್ಮ ತವರು ಮನೆಯಲ್ಲಿದ್ದರು.
ದೇವೇಗೌಡರು ತಮ್ಮ ಹಣಕಾಸಿನ ತುರ್ತಿನ ಬಗ್ಗೆ ಒಂದು ಸಂದೇಶ ಬರೆದು ತಮ್ಮ ನಂಬಿಕಸ್ಥ ಬೆಟ್ಟಯ್ಯನ ಕೈಯಲ್ಲಿ ಕೊಟ್ಟು ಚೆನ್ನಮ್ಮನವರಿಗೆ ಕೊಡಲು ಹೇಳುತ್ತಾರೆ. ಚೆನ್ನಮ್ಮ ಯಾವುದೇ ಹಿಂಜರಿಕೆ ಇಲ್ಲದೆ ತಮ್ಮ ತಂದೆ-ತಾಯಿಗೂ ತಿಳಿಸದೇ ತಮ್ಮ ಮದುವೆ ಒಡವೆಯನ್ನ ಬೆಟ್ಟಯ್ಯನ ಕೈಗೆ ಕೊಟ್ಟು ಅದನ್ನ ಅಡ ಇಟ್ಟು ದುಡ್ಡು ಪಡೆಯುವಂತೆ ಹೇಳಿ ಕಳುಹಿಸುತ್ತಾರೆ. ಕೆಲವು ತಿಂಗಳ ನಂತರ ದೇವೇಗೌಡರು ಒಡವೆ ಬಿಡಿಸಿಕೊಂಡು, ಚೆನ್ನಮ್ಮನವರಿಗೆ ಕೊಡಲು ಹೋದಾಗ, ಎಲ್ಲಿಯ ತನಕ ದೇವೇಗೌಡರಿಗೆ ಒಡವೆ ಅಡ ಇಡುವ ಪ್ರಸಂಗ ಬರುವುದಿಲ್ಲವೋ ಅಲ್ಲಿಯ ತನಕ ತಾವು ಅವುಗಳನ್ನು ಧರಿಸುವುದಿಲ್ಲ ಮತ್ತು ಅಲ್ಲಿಯ ತನಕ ದೇವೇಗೌಡರು ಅವುಗಳನ್ನು ತಮ್ಮ ಕೆಲಸದ ಅಗತ್ಯಗಳಿಗೆ ಬಳಸಬಹುದು ಎಂದು ಹೇಳುತ್ತಾರೆ. ಆಪತ್ಕಾಲಕ್ಕೆ ತನ್ನ ಹೆಂಡತಿಯ ಒಡವೆ ಗಿರವಿ ಇಡದಿರುವಂತಹ ಸಂದರ್ಭ ಬರದಿರಲು ದೇವೇಗೌಡರಿಗೆ ಹಲವು ವರ್ಷಗಳೇ ಬೇಕಾಗುತ್ತವೆ.
ಚೆನ್ನಮ್ಮ ಅವರು ಕರ್ನಾಟಕದ ಗ್ರಾಮೀಣ ಸಂಸ್ಕೃತಿಯಲ್ಲಿ ಬೆಳೆದ ಸರಳ ಸ್ವಭಾವದ ಮಹಿಳೆ. ಐಷಾರಾಮಿ ಬದುಕಿಗಿಂತ ಕುಟುಂಬದ ಮೌಲ್ಯಗಳು, ಶಿಸ್ತು ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಅವರು, ಮದುವೆಯಾದ ನಂತರ ಸಂಪೂರ್ಣವಾಗಿ ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತರು.
ದೇವೇಗೌಡ ಕುಟುಂಬದ ಪ್ರಮುಖ ಸದಸ್ಯೆಯಾಗಿದ್ದರೂ, ಚೆನ್ನಮ್ಮ ಅವರು ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ವಿರಳ. ಚುನಾವಣಾ ಪ್ರಚಾರ, ರಾಜಕೀಯ ಭಾಷಣಗಳು ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಅವರು ಎಂದಿಗೂ ಮುಂಚೂಣಿಯಲ್ಲಿರಲಿಲ್ಲ. ಇದೇ ಅವರ ವ್ಯಕ್ತಿತ್ವದ ವಿಶೇಷತೆ.
