Karwar| ಕಾರವಾರದ ಕಡಲತೀರದಲ್ಲಿ ತೇಲಿಬಂದ ಮೃತ ಕಡಲಾಮೆ

ಕಾರವಾರ( karwar)ನಗರದ ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಆಲಿವ್ ರಿಡ್ಲಿ ಜಾತಿಯ ಕಡಲಾಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ
ಇದನ್ನೂ ಓದಿ:-Karwar| ಕಾರವಾರದ ತಾಜ್ ಹೋಟೆಲ್ ಗೆ ಬೆಂಕಿ-ಹಾನಿ
ಟಾಗೋರ್ ಕಡಲ ತೀರದಲ್ಲಿರುವ ಚಾಪಲ್ ವಾರ್ಶಿಪ್ ಮ್ಯೂಸಿಯಂ ಹಿಂಭಾಗದ ಸಮುದ್ರ ತೀರದಲ್ಲಿ ಬುಧವಾರ ಬೆಳಗ್ಗೆ ಸ್ಥಳೀಯರ ಗಮನಕ್ಕೆ ಮೃತ ಕಡಲಾಮೆ ಕಳೆಬರಹ ಕಾಣಿಸಿದೆ. ಮಾಹಿತಿ ತಿಳಿದ ಬಳಿಕ ಅರಣ್ಯ ಇಲಾಖೆ ಹಾಗೂ ಮರೈನ್ ಎಸ್ಪಿಎಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಮೃತ ಕಡಲಾಮೆಯ ದೇಹವನ್ನು ಪರಿಶೀಲಿಸಿದ ಅಧಿಕಾರಿಗಳು, ಅದು ಕೆಲ ದಿನಗಳ ಹಿಂದೆಯೇ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದರಿಂದ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ನಡೆಸುವುದು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಥಳದಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು.
ಕಡಲ ತೀರದಲ್ಲೇ ಅಂತ್ಯಸಂಸ್ಕಾರ

ಕಡಲಾಮೆಯ ದೇಹವನ್ನು ಸ್ಥಳಾಂತರಿಸುವ ಬದಲು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಕಡಲ ತೀರದಲ್ಲಿಯೇ ಹೊಂಡ ತೆಗೆದು ಹೂಳಲಾಯಿತು. ಕೊಳೆತ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮೀನುಗಾರಿಕಾ ಬಲೆಗೆ ಸಿಲುಕಿತೇ?
ಆಲಿವ್ ರಿಡ್ಲಿ ಕಡಲಾಮೆಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಸದ್ಯ ಸಮುದ್ರದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ, ಮೀನುಗಾರಿಕಾ ಬಲೆ ಅಥವಾ ದೋಣಿಗೆ ಸಿಲುಕಿ ಕಡಲಾಮೆ ಗಾಯಗೊಂಡು ಮೃತಪಟ್ಟಿರಬಹುದೆಂಬ ಶಂಕೆ ಸ್ಥಳೀಯರು ಹಾಗೂ ಅಧಿಕಾರಿಗಳಲ್ಲಿ ಮೂಡಿದೆ.
ಇದನ್ನೂ ಓದಿ:-Gokarna|ಗೋಕರ್ಣದಲ್ಲಿ ಮಹಿಳೆಯರೊಂದಿಗೆ ಪರಸ್ಪರ ವಿವಾಹ|ಏನಿದು ವಿಶೇಷ?
ಸಮುದ್ರದಲ್ಲಿ ಸಂಚರಿಸುವಾಗ ಮೀನುಗಾರಿಕಾ ಬಲೆಗಳಿಗೆ ಸಿಲುಕುವುದು, ದೋಣಿಗಳೊಂದಿಗೆ ಡಿಕ್ಕಿಯಾಗುವುದು ಸೇರಿದಂತೆ ವಿವಿಧ ಕಾರಣಗಳಿಂದ ಕಡಲಾಮೆಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದರೆ ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ಸಾಧ್ಯವಾಗದ ಕಾರಣ ಸಾವಿನ ನಿಖರ ಕಾರಣವನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ.
ಕಾರವಾರದ ಕರಾವಳಿ ಪ್ರದೇಶದಲ್ಲಿ ಈ ಹಿಂದೆ ಕೂಡ ಕಡಲಾಮೆಗಳು ಮೃತ ಅಥವಾ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆಗಳು ನಡೆದಿದ್ದು, ಸಮುದ್ರ ಜೀವಿಗಳ ಸಂರಕ್ಷಣೆ ಹಾಗೂ ಮೀನುಗಾರಿಕಾ ಚಟುವಟಿಕೆಗಳ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
