ಕಾರವಾರ (07 ಸೆಪ್ಟೆಂಬರ್ 2026):-ಯಲ್ಲಾಪುರ (yallapur)ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಲಾರಿಗಳ ನಡುವೆ ಕಾರು ಸಿಲುಕ ಭೀಕರ ಅಪಘಾತದಲ್ಲಿ ಪುಣೆಯ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಕಾರು ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತರನ್ನು ಮಹಾರಾಷ್ಟ್ರದ ಪುಣೆಯ ಮೃಣ್ಮಯಿ ರಾಜನ್ ಕುಲ್ತೆ (32) ಹಾಗೂ ಶರ್ಮಿಳಾ ರಾಜನ್ ಕುಲ್ತೆ (59) ಎಂದು ಗುರುತಿಸಲಾಗಿದೆ. ಕಾರು ಚಾಲಕ ಆಲಂಬಾಷಾ ತಂದೆ ವಲಿಸಾನ್ ಶೇಖ್ (55) ಗಾಯಗೊಂಡಿದ್ದು, ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿ ಪ್ರಕಾರ, ಆಲಂಬಾಷಾ ಅವರು ಕಾರಿನಲ್ಲಿ ಪುಣೆಯ ಪ್ರಯಾಣಿಕರಾದ ಮೃಣ್ಮಯಿ ಹಾಗೂ ಶರ್ಮಿಳಾ ಅವರನ್ನು ಕರೆದುಕೊಂಡು ಹೊಸಪೇಟೆಯಿಂದ ಬಾದಾಮಿಗೆ ತೆರಳಿದ್ದರು. ಬಾದಾಮಿಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಅರಬೈಲ್ ಘಟ್ಟದ ಬಳಿ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:-Yallapur |ಮೊಬೈಲ್ ,ಹಣ ಕಳೆದುಕೊಂಡು ಕಾಡಿನಲ್ಲಿ ಅಲೆದ ವಿದೇಶಿಗನಿಗೆ ಯಲ್ಲಾಪುರ ಪೊಲೀಸರ ನೆರವು.
ರಾತ್ರಿ ಅರಬೈಲ್ ಘಟ್ಟದ ಬಳಿ ಕಾರು ಸಾಗುತ್ತಿದ್ದಾಗ, ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಲಾರಿಯ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ಚಲಿಸಿ, ಅದರ ಮುಂಭಾಗದಲ್ಲಿ ಸಾಗುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಸಿಲುಕಿಕೊಂಡಿದೆ.ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದರು.
ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ, ಆಂಬ್ಯುಲೆನ್ಸ್ ಮೂಲಕ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರೀಕ್ಷಿಸಿದ ಬಳಿಕ ಮೃಣ್ಮಯಿ ರಾಜನ್ ಕುಲ್ತೆ ಹಾಗೂ ಶರ್ಮಿಳಾ ರಾಜನ್ ಕುಲ್ತೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಲಾರಿಯ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುರೇಶ ಜಿ. ಕುಂಬಾರ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.
