Banavasi| ವಿಶಪೂರಿತ ಹಾವು ಕಡಿದು ಪುಟ್ಟ ಬಾಲಕ ಸಾವು-ಸಹೋದರಿಗೆ ಚಿಕಿತ್ಸೆ
Banavasi/ಶಿರಸಿ : ವಿಷಪೂರಿತ ಹಾವು ಕಚ್ಚಿದ ಪರಿಣಾಮ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಆತನ ಸಹೋದರಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಹೃದರ ವಿದ್ರಾಹಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ (banavasi)ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಇದನ್ನ ಓದಿ: –Sirsi-ಮುಗಿಯದ ಶಿರಸಿ-ಹಾವೇರಿ ಹೆದ್ದಾರಿ ಗೋಳು-ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಅರ್ಪಿಸಿದ ಜನ
ಸಹಸ್ರಳ್ಳಿಯ ನಿವಾಸಿ ಪುಟ್ಟಪ್ಪ ನಾಯ್ಕ ಎಂಬುವವರ ಪುತ್ರ ಮಿಥುನ್ (12) ಹಾವಿನ ಕಡಿತಕ್ಕೆ ಬಲಿಯಾದ ದುರ್ದೈವಿ. ಈತನ ಸಹೋದರಿ ದೀಕ್ಷಾ ಪುಟ್ಟಪ್ಪ ನಾಯ್ಕ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆಯ ವಿವರ:
ಮಂಗಳವಾರ ತಡರಾತ್ರಿ ಮಿಥುನ್ ಹಾಗೂ ದೀಕ್ಷಾ ತಂದೆಯ ಜೊತೆ ಮಲಗಿದ್ದರು. ಬೆಳಗಿನ ಜಾವದ ಸುಮಾರಿಗೆ ಇಬ್ಬರೂ ಮಕ್ಕಳು ಏಕಾಏಕಿ ಎದ್ದು ತೀವ್ರವಾಗಿ ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದರಿಂದ ಗಾಬರಿಗೊಂಡ ಪಾಲಕರು ಲೈಟ್ ಹಾಕಿ ನೋಡಿದಾಗ ಮಕ್ಕಳು ತೀವ್ರ ಅಸ್ವಸ್ಥರಾಗಿರುವುದು ಕಂಡುಬಂದಿದೆ. ತಕ್ಷಣವೇ ಪಾಲಕರು ಅಕ್ಕಪಕ್ಕದವರನ್ನು ಕರೆದಿದ್ದು, ಈ ವೇಳೆ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೊರಹೋಗಿರುವುದು ಬೆಳಕಿಗೆ ಬಂದಿದೆ.
ದಾರಿ ಮಧ್ಯೆ ಸಾವು:
ಮಕ್ಕಳ ಸ್ಥಿತಿ ಕಂಡು ಆತಂಕಗೊಂಡ ಪಾಲಕರು ತಕ್ಷಣವೇ ಇಬ್ಬರನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮಿಥುನ್ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಸಹೋದರಿ ದೀಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ವಿಷಪೂರಿತ ಹಾವು ಮೃತ ಮಿಥುನ್ನ ಕಿವಿಗೆ ಹಾಗೂ ದೀಕ್ಷಾಳ ಕೈ ಬೆರಳಿಗೆ ಕಚ್ಚಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಬನವಾಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
