Belagavi : ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಭ್ರೂಣ ಪರೀಕ್ಷೆ ಮತ್ತು ಭ್ರೂಣಹತ್ಯೆ ಕುರಿತಂತೆ ನಿಖರ ಮಾಹಿತಿ ನೀಡುವವರಿಗೆ ರೂ.1 ಲಕ್ಷ ರೂ ಗಳ ಬಹುಮಾನ ನೀಡುವುದರ ಜೊತೆಗೆ ಮಾಹಿತಿ ನೀಡವವರ ಗೋಪ್ಯತೆಯನ್ನು ಕಾಪಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇದನ್ನೂ ಓದಿ:-ಕುಮಟಾದ ಆಸ್ಪತ್ರೆಯಲ್ಲಿ ಬ್ರೂಣ ಲಿಂಗ ಪತ್ತೆ! ಈ ಆಸ್ಪತ್ರೆಯಲ್ಲಿ ನಡೆಯುತ್ತೆ ಕಳ್ಳ ವ್ಯವಹಾರ!
ಅವರು ಬುಧವಾರ ವಿಧಾನಪರಿಷತ್ನಲ್ಲಿ ನಡೆದ ಗಮನ ಸೆಳೆಯುವ ಸೂಚನೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದರು.
ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ತಡೆಯುವ ಕುರಿತಂತೆ ಪ್ರಸ್ತುತ ಜಾರಿಯಲ್ಲಿರುವ ಪಿಸಿಪಿಎನ್ಡಿಟಿ ಕಾಯಿದೆಯನ್ವಯ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುವುದರ ಜೊತೆಗೆ ಪ್ರತೀ 3 ತಿಂಗಳಿಗೊಮ್ಮೆ ಅಧಿಕಾರಿಗಳ ಮೂಲಕ ಗೋಪ್ಯ ಕಾರ್ಯಚರಣೆ ನಡೆಸುವ ಮೂಲಕ ಅಕ್ರಮ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ನಡೆಯುವ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಕುರಿತಂತೆ ಸಾರ್ವಜನಿಕರು ಇಲಾಖೆಯ ಉಚಿತ ಸಹಾಯವಾಣಿ 104 ಗೆ ಮಾಹಿತಿ ನೀಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಪತ್ಯೇಕ ಸಹಾಯವಾಣಿ ಆರಂಭಿಸಲಾಗುವುದು ಹಾಗೂ ನಿಖರ ಮಾಹಿತಿ ನೀಡುವ
ಸಾರ್ವಜನಿಕರಿಗೆ 1 ಲಕ್ಷ ರೂ ಗಳ ಬಹುಮಾನ ನೀಡಲಾಗುವುದು ಎಂದರು.
ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಉಪ ವಿಭಾಗಗಳ ಮಟ್ಟದಲ್ಲಿ ತಂಡ ರಚಿಸುವ ಮೂಲಕ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಾಹಿತಿ ಪಡೆಯುವ ಮೂಲಕ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ತಪ್ಪಿತಸ್ಥರ ವಿರುದ್ದ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಇದನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.