BREAKING NEWS
Search

ಬೇಸಿಗೆ ರಜೆಯಲ್ಲಿ 223 ತಾಲೂಕಿನ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ:ಕಾರಣ ಇಲ್ಲಿದೆ ನೋಡಿ

94

ಬೆಂಗಳೂರು, ಫೆಬ್ರವರಿ 02: ರಾಜ್ಯದ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯ ಕಾರಣ ಬರ ಪರಿಸ್ಥಿತಿ ಎದುರಾಗಿರುವ ಘೋಷಿತ ಜಿಲ್ಲೆಗಳ ಬರ ಪೀಡಿತ ತಾಲೂಕುಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ.

ಈ ಕುರಿತು ಸಿಂಧು ಬಿ. ರೂಪೇಶ್, ನಿರ್ದೇಶಕರು. ಪಿ.ಎಂ.ಪೋಷಣ್, ಶಾಲಾ ಶಿಕ್ಷಣ ಇಲಾಖೆ,( education department) ಬೆಂಗಳೂರು ಇವರು ಜ್ಞಾಪನಾ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:-Bhatkal ಧ್ವಜ ದಂಗಲ್ ! ಮತ್ತೆ ನಿರ್ಮಾಣವಾಯ್ತು ವೀರ ಸಾವರ್ಕರ್ ಧ್ವಜಕಟ್ಟೆ -ಧ್ವಜವೇರಿಸಲು 15 ದಿನ ಗಡುವು! ಏನಿದು ವಿವಾದ?

ಈ ಜ್ಞಾಪನಾ ಪತ್ರ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲ್ಲೂಕುಗಳೆಂದು ಕರ್ನಾಟಕ ಸರ್ಕಾರ ಘೋಷಿಸಿದ್ದು, ಏಪ್ರಿಲ್‌ 2024 ಮತ್ತು ಮೇ 2024 ತಿಂಗಳ ಬೇಸಿಗೆ ರಜಾ ಅವಧಿಯಲ್ಲಿ ಪಿ.ಎಂ.ಪೋಷಣ್ – ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬಿಸಿಯೂಟವನ್ನು ಶಾಲಾ ಮಕ್ಕಳಿಗೆ ವಿತರಿಸಿ ಅನುಷ್ಠಾನಗೊಳಿಸುವ ಪೂರ್ವ ಸಿದ್ಧತೆಯ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ವಿವಿಧ ಸರ್ಕಾರಿ ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.

ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ಕರ್ನಾಟಕ ಸರ್ಕಾರದ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020 ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನ್ವಯ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ 223 ತಾಲ್ಲೂಕುಗಳನ್ನು ಬರ ಪಿಡೀತ ತಾಲ್ಲೂಗಳೆಂದು ಸರ್ಕಾರವು ಘೋಷಿಸಿದ್ದು, ಇದು ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಹೇಳಿದೆ.

ಮಧ್ಯಾಹ್ನದ ಬಿಸಿಯೂಟ:ಎಲ್ಲಿ ಎಷ್ಟು?

ಒಟ್ಟು 223 ಬರ ಪೀಡಿತವೆಂದು ಘೋಷಿಸಿರುವ ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 8 ನೇ ತರಗತಿಗಳಲ್ಲಿ ಪ್ರಸ್ತುತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಏಪ್ರಿಲ್-2024 ಮತ್ತು ಮೇ-2024ರ ತಿಂಗಳುಗಳಲ್ಲಿ ಒಟ್ಟು 41 ದಿನಗಳ ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟವನ್ನು ವಿತರಿಸಲಾಗುತ್ತದೆ.

ಈ ಸಂಬಂಧ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳ ಪ್ರಸ್ತುತ ತರಗತಿವಾರು ದಾಖಲಾತಿ ಹಾಜರಾತಿಯಂತೆ ಬಿಸಿಯೂಟ ಸ್ವೀಕರಿಸಲು ಇಚ್ಛಿಸುವ/ ಅಪೇಕ್ಷೆ ಹೊಂದಿರುವ ಮಕ್ಕಳ ಸಂಖ್ಯಾ ಬಲವನ್ನು ಗುರುತಿಸುವ ಸಂಬಂಧ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕಿನ ಸಹಾಯಕ ನಿರ್ದೇಶಕರು ಅಗತ್ಯ ಕ್ರಮ ವಹಿಸಿ ಜಿಲ್ಲಾವಾರು ಕ್ರೋಢಿಕರಿಸಿದ ಮಾಹಿತಿಯನ್ನು [email protected] ಇ-ಮೇಲ್ ವಿಳಸಕ್ಕೆ ತಪ್ಪದೇ ತುರ್ತಾಗಿ ಸಲ್ಲಿಸುವಂತೆ ಸೂಚಿಸಿದೆ.

ಯಾವ ವಿವರ ಸಲ್ಲಿಸಲು ಸೂಚನೆ ?:-

ಶಾಲಾ ಹಂತದಲ್ಲಿ ತರಗತಿವಾರು ಪ್ರತಿ ವಿದ್ಯಾರ್ಥಿಯಿಂದ ಬಿಸಿಯೂಟವನ್ನು ಸ್ವೀಕರಿಸುವ ಸಲುವಾಗಿ ವಿದ್ಯಾರ್ಥಿ ಮತ್ತು ಪೋಷಕರಿಂದ ಒಪ್ಪಿಗೆ ಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಪಡೆದುಕೊಳ್ಳುವುದು.

ಒಪ್ಪಿಗೆ ಪತ್ರ ಆಧರಿಸಿ ಶಾಲಾ ಹಂತದಲ್ಲಿ ಬಿಸಿಯೂಟವನ್ನು ಸ್ವೀಕರಿಸುವ ಮಕ್ಕಳ ಸಂಖ್ಯಾಬಲವನ್ನು ಗುರುತಿಸಿ ನಿಗದಿತ ನಮೂನೆಯಲ್ಲಿ ತರಗತಿವಾರು ಕ್ರೋಢಿಕರಿಸಿ ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ಇವರಿಗೆ ಸಲ್ಲಿಸುವುದು.

ತಾಲೂಕು ಹಂತದಲ್ಲಿ ಶಾಲಾವಾರು ಮತ್ತು ತರಗತಿವಾರು (class )ಒಪ್ಪಿಗೆ ಸೂಚಿಸಿರುವ ಮಕ್ಕಳ ಸಂಖ್ಯಾಬಲವನ್ನು ಕ್ರೋಢಿಕರಿಸಿ, ತಾಲ್ಲೂಕುವಾರು ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಪಿ.ಎಂ.ಪೋಷಣ್ ಅವರು ಧೃಢೀಕರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿ, ಪಿ.ಎಂ.ಪೋಷಣ್ ಇವರಿಗೆ ಸಲ್ಲಿಸುವುದು

ಜಿಲ್ಲಾವಾರು ಕ್ರೋಡಿಕರಿಸಿದ ಮಾಹಿತಿಯನ್ನು ಧೃಢೀಕರಿಸಿ ಜಿಲ್ಲಾ ಪಂಚಾಯಿತಿ ಶಿಕ್ಷಣಾಧಿಕಾರಿಗಳು, ಪಿ.ಎಂ.ಪೋಷಣ್ ಅವರು ರಾಜ್ಯ ಕಛೇರಿಗೆ ಇ-ಮೇಲ್ ಮಾಡಿ, ತಪ್ಪದೇ ಸಲ್ಲಿಸುವುದು.

ಸದರಿ ಮಾಹಿತಿಯು ಅತ್ಯಂತ ಜರೂರಾಗಿರುವುದರಿಂದ ವಿಳಂಬಕ್ಕೆ ಅವಕಾಶ ಕೊಡದೇ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜ್ಞಾಪನಾ ಪತ್ರದಲ್ಲಿ ಸೂಚನೆ ನೀಡಲಾಗಿದ್ದು ಮುಂಬರುವ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟ ಸಿಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!