Uttara kannada|ಮಂಡೂಕಗಳಿಗೆ ಕಳ್ಳರ ಕಾಟ -ಗೋವಾದಲ್ಲಿ ಜಂಪಿಂಗ್ ಚಿಕನ್ ಗೆ ಕಾರವಾರವೇ ಮಾರುಕಟ್ಟೆ!
Uttara kannada/ಕಾರವಾರ :- ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಗೋವಾದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಎಂದರೇ ಜಂಪಿಂಗ್ ಚಿಕನ್ ಗೆ ಎಲ್ಲಿಲ್ಲದ ಬೇಡಿಕೆ. ನಿಷೇಧದ ನಡುವೆ ಇವುಗಳ ಪೂರೈಕೆ ಮಾತ್ರ ಕಾರವಾರದಿಂದ ಆಗುತ್ತಿದೆ.
ಅರೇ ಇದೇನಿದು ಜಂಪಿಂಗ್ ಚಿಕನ್ ಹೊಸದಾಗಿ ಕೇಳ್ತಾ ಇದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಚಿಕನ್ ಏನಾದ್ರು ಜಂಪ್ ಮಾಡುತ್ತಾ ಎಂದು ನೀವು ತಮಾಷೆ ಮಾಡಬಹುದು.
ಹೌದು “ಜಂಪಿಂಗ್ ಚಿಕನ್” ಎಂದರೆ ಕಪ್ಪೆ ಮಾಂಸ ಎಂದರ್ಥ. ಕಪ್ಪೆ ಚಿಕ್ಕದಾಗಿರುತ್ತೆ ಅದು ಹೇಗೆ ಚಿಕನ್ ಗೆ ಸಮ ಎನ್ನಬಹುದು. ಪಶ್ಚಿಮ ಘಟ್ಟ ಭಾದಲ್ಲಿ ಮಳೆಗಾಲ ಪ್ರಾರಂಭ ಆಯ್ತು ಅಂದ್ರೆ “ಇಂಡಿಯನ್ ಬುಲ್ ಫ್ರಾಗ್ “( Indian bull frog) ತಳಿಯ ಬೃಹದಾಕಾರದ ಕಪ್ಪೆಗಳು ಸಂತಾನೋತ್ಪತ್ತಿಗೆ ತನ್ನ ಆವಾಸ ಸ್ಥಾನ ಬಿಟ್ಟು ಹೊರಬರುತ್ತವೆ. ಇವು ಗಾತ್ರದಲ್ಲಿ ದೊಡ್ಡದಿದ್ದು, ಏಳರಿಂದ ಎಂಟು ಕೆಜಿ ವರೆಗೂ ತೂಗುತ್ತವೆ. ಒಂದು ಚಿಕ್ಕ ಕೋಳಿಗೆ ಸಮವಿರುತ್ತವೆ. ಈ ಕಪ್ಪೆಗಳನ್ನ ಜೀವಂತ ಹಿಡಿದು ಗೋವಾದಲ್ಲಿ ಮಾಂಸಕ್ಕಾಗಿ ಬಳಸುತ್ತಾರೆ.
ಕಪ್ಪೆ ಮಾಂಸ ಹೇಗೆ ಬಳಕೆ !

ದೊಡ್ಡ ದೊಡ್ಡ ಕಪ್ಪೆಗಳನ್ನ ಜೀವಂತ ಹಿಡಿಯಲಾಗುತ್ತದೆ. ಇವುಗಳನ್ನ ಜೀವಂತವಾಗಿ ಹಿಡಿದು ದೊಡ್ಡ ದೊಡ್ಡ ಹೋಟಲ್ ಗಳಿಗೆ ಸಾವಿರಾರು ರುಪಾಯಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿ ಈ ಕಪ್ಪೆಗಳನ್ನ ಜೀವಂತವಾಗಿಯೇ ಬೇಯಿಸಲಾಗುತ್ತದೆ. ನಂತರ ಇವುಗಳ ಕಾಲುಗಳನ್ನ ತುಂಡರಿಸಿ ಕಬಾಬ್ ರೂಪದಲ್ಲಿ ಭಕ್ಷಿಸಲಾಗುತ್ತದೆ.ರುಚಿಯಲ್ಲಿ ಚಿಕನ್ ನಂತೆ ಇರುವುದರಿಂದ ಇದಕ್ಕೆ ಜಂಪಿಂಗ್ ಚಿಕನ್ ಎಂಬ ಹೆಸರು ಬಂದಿದೆ. ಗೋವಾದಲ್ಲಿ ಈ ಕಪ್ಪೆ ಮಾಂಸಕ್ಕೆ ಬಲು ಬೇಡಿಕೆ ಇದ್ದು ಸಾವಿರಾರು ರುಪಾಯಿ ನೀಡಿ ಈ ಖಾದ್ಯವನ್ನ ಗ್ರಾಹಕರು ಖರೀದಿಸುತ್ತಾರೆ.
ಕಾರವಾರವೇ ಮಾರುಕಟ್ಟೆ!

“ಇಂಡಿಯನ್ ಬುಲ್ ಫ್ರಾಗ್ ” ತಳಿಯ ಬೃಹದಾಕಾರದ ಕಪ್ಪೆಗಳು ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ. ಮಳೆಗಾಲ ಪ್ರಾರಂಭವಾದರೇ ಉತ್ತರ ಕನ್ನಡ(uttara kannada) ಜಿಲ್ಲೆಯ ಕಾರವಾರ,(karwar)ಅಂಕೋಲ, ಭಟ್ಕಳ ಸೇರಿದಂತೆ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಕಾಣಸಿಗುತ್ತವೆ.
ಇದನ್ನೂ ಓದಿ:-Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ
ಇವುಗಳು ದೇಹದಲ್ಲಿ ದೊಡ್ಡದಿರುವುದರಿಂದ ಬೇಟೆಗಾರರಿಗೆ ಬಲು ಬೇಗ ಜೀವಂತವಾಗಿಗಿಯೇ ಸಿಗುತ್ತವೆ. ಇನ್ನು ಇವುಗಳು ಹೆಚ್ಚಾಗಿ ಗೋವಾ ಗಡಿಯ ಕಾರವಾರದಲ್ಲಿ ಕಾಣಸಿಗೋದ್ರಿಂದ ಅಕ್ರಮ ಸಾಗಾಟದಾರರಿಗೆ ಕಾರವಾರವೇ ಮಾರುಕಟ್ಟೆಯಾಗಿದೆ.
ಕಾರವಾರದಲ್ಲಿ ಈ ಕಪ್ಪೆಗಳನ್ನ ಜೀವಂತ ಸಂಗ್ರಹಿಸಿ ಪಕ್ಕದಲ್ಲೇ ಇರುವ ಗೋವಾಕ್ಕೆ ಸಲೀಸಾಗಿ ಸಾಗಾಟ ಮಾಡಿ ಬೇಡಿಕೆ ಇರುವ ಹೋಟಲ್ ಗೆ ಪೂರೈಕೆ ಮಾಡುತ್ತಾರೆ.
ಕಳೆದ ವರ್ಷ ನೂರಾರು ಕಪ್ಪೆಗಳನ್ನ ಗಡಿಯಲ್ಲಿ ಹಿಡಿದು ರಕ್ಷಣೆ ಮಾಡಲಾಗಿತ್ತು.ಆದರೇ ಈ ವರ್ಷ ಕಪ್ಪೆ ಸಾಗಾಟದಾರರು ಯಾವುದೇ ಅಳುಕಿಲ್ಲದೇ ಕಪ್ಪೆಗಳನ್ನು ಸಂಗ್ರಹಿಸಿ ಇವುಗಳ ಸಾಗಾಟ ಮಾಡುತಿದ್ದು,ದೊಡ್ಡ ದೊಡ್ಡ ಹೋಟಲ್ ಗೆ ಸಪ್ಲೆ ಮಾಡುತಿದ್ದಾರೆ.
ಕಪ್ಪೆ ಬೇಟೆಗೆ ಇದೆ ನಿರ್ಬಂಧ

ಅಳವಿನ ಅಂಚಿನಲ್ಲಿರುವ ಇಂಡಿಯನ್ ಬುಲ್ ಫ್ರಾಗ್ ಕಪ್ಪೆಗಳ ಭೇಟೆಗೆ ಕರ್ನಾಟಕ ,ಗೋವಾದಲ್ಲಿ ನಿಷೇಧವಿದೆ.
ಕರ್ನಾಟಕದಲ್ಲಿ ಕಪ್ಪೆ ಬೇಟೆ ಅದರ ಮಾಂಸ ಭಕ್ಷಣೆಗೆ ಮೂರು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸಲಾಗುತ್ತದೆ.
ಆದರೇ ಈ ಕಪ್ಪೆಗಳ ರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಮುತುವರ್ಜಿ ವಹಿಸದ ಕಾರಣ ಕಾರವಾರ ದಿಂದ ಗೋವಾ ಗಡಿಗೆ ಸಲೀಸಾಗಿ ಸಾಗಾಟ ಆಗುತ್ತಿದೆ.
ಕಪ್ಪೆಗಳು ನಿಸರ್ಗದ ವೈದ್ಯ
ಈ ಕಪ್ಪೆಗಳು(frog) ಸೊಳ್ಳೆಗಳು,ಅವುಗಳ ಲಾರ್ವವನ್ನ ಭಕ್ಷಿಸುತ್ತವೆ.ಇದರ ಜೊತೆಗೆ ಕೀಟಗಳನ್ನ ಸಹ. ಈ ಮೂಲಕ ಸೊಳ್ಳೆಗಳಿಂದ ಬರುವ ರೋಗಗಳನ್ನ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳು ಸೊಳ್ಳೆ ಜೊತೆಗೆ ಭತ್ತ ಸೇರಿದಂತೆ ಇತರೆ ಬೆಳೆಗೆ ದಾಳಿ ಮಾಡುವ ಕೀಟಗಳನ್ನ ಸಹ ಭಕ್ಷಿಸುತ್ತವೆ ಹೀಗಾಗಿ ಇವುಗಳ ನಿಸರ್ಗದ ಕಾಣಿಕೆ ದೊಡ್ಡದು.
ಆದರೇ ಇದೀಗ ಈ ಕಪ್ಪೆಗಳ ಭಕ್ಷಣೆ ಹೆಚ್ಚಾಗುತಿದ್ದು ಅಳವಿನಂಚಿನತ್ತ ಸಾಗಿದೆ.
