

ಕಾರವಾರ, ಸೆಪ್ಟೆಂಬರ್ 12:ವೃದ್ದಾಪ್ಯದಲ್ಲಿ ಮಕ್ಕಳು ತಂದೆ ತಾಯಿಗೆ ಆಶ್ರಯವಾಗಿರಬೇಕು ಎಂಬುದು ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರ ಆಸೆ.ಆದರೇ
ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಗೆ ಕೊನೆಗಾಲದಲ್ಲಿ ಆಸರೆಯಾಗಬೇಕಿದ್ದ ಐವರು ಮಕ್ಕಳು ತಾಯಿಯನ್ನ ನೋಡಿಕೊಳ್ಳುವುದಿರಲಿ ಆಸ್ಪತ್ರೆಯಲ್ಲಿಯೇ ಬಿಟ್ಟುಹೋದ ಅವಮಾನವೀಯ ಮನಕಲಕುವ ಘಟನೆ ಉತ್ತರ ಕನ್ನಡ (uttara kannada) ಜಿಲ್ಲೆಯ ಕಾರವಾರ(karwar) ದಲ್ಲಿ ನಡೆದಿದೆ.
ಕಾರವಾರ ತಾಲೂಕಿನ ಶಿರವಾಡದ ನಿವಾಸಿ ಈರವ್ವ ಎಂಬುವವರೇ ಈ ನತದೃಷ್ಟ ತಾಯಿ. ಇವರಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ ಸೇರಿದಂತೆ ಒಟ್ಟು ಐದು ಮಂದಿ ಮಕ್ಕಳಿದ್ದಾರೆ. ಎಲ್ಲರಿಗೂ ಮದುವೆಯಾಗಿ ಬೇರೆ ಬೇರೆ ಊರುಗಳಲ್ಲಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲ ತಿಂಗಳಿಂದ ತಾಯಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡು ಹಾಸಿಗೆ ಹಿಡಿಯುತ್ತಿದ್ದಂತೆ ಮಕ್ಕಳು ಮಾತ್ರ ಕುಂಟು ನೆಪ ಹೇಳಿ ದೂರವಾಗಿದ್ದಾರೆ.
ಕ್ರಿಮ್ಸ್ ಆಸ್ಪತ್ರೆಗೆ ದಾಖಲು; ಮಕ್ಕಳ ಪಲಾಯನ
ಲಿವರ್ ಸಮಸ್ಯೆಯಿಂದ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಈರವ್ವ ಚಿಕಿತ್ಸೆ ಪಡೆಯುತ್ತಿದ್ದಾರೆ. ದೊಡ್ಡ ಮಗಳು ಗೀತಾ ತಾಯಿಯ ಆರೈಕೆ ಮಾಡುತ್ತಿದ್ದಾರೆ. ಆದರೆ ತಾನೂ ಬಾಡಿಗೆ ಮನೆಯಲ್ಲಿ ಇರೋದ್ರಿಂದ ತಾಯಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿದ್ದಾರೆ. ಇನ್ನು ಮೂವರು ತಂಗಿಯರು ಕೆಲ ದಿನ ಆಸ್ಪತ್ರೆ ಕಡೆ ಬಂದು ಹೋಗಿದ್ದಾರೆ. ಆದರೆ ಮೊನ್ನೆ ಓರ್ವ ತಂಗಿ ದುರ್ಗಾ ಎಂಬಾಕೆ ಆಸ್ಪತ್ರೆಯಿಂದ ಹೊರಟು ಹೋಗಿ ವಾಪಸ್ ಬಂದಿಲ್ಲ. ನಿನ್ನೆ ಇಬ್ಬರು ತಂಗಿಯರು ಊಟ ತರುತ್ತೇವೆ ಅಂತಾ ಹೋದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪಲಾಯನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ:-Karwar | ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಭರ್ಜರಿ ಕಪ್ಪಾ! MSIL ನಲ್ಲಿ ದರಕ್ಕಿಂತ ದುಬಾರಿಯಾದ ಮದ್ಯ!
ಆಸ್ಪತ್ರೆಯಲ್ಲಿ ಇರುವ ತಾಯಿಯನ್ನು ಎಲ್ಲಿಯಾದರೂ ಬಿಟ್ಟುಬಿಡಿ. ನಮಗೆ ಸಂಬಂಧವಿಲ್ಲ ಅನ್ನೋ ರೀತಿಯಲ್ಲಿ ಮಕ್ಕಳು ವರ್ತಿಸುತ್ತಿದ್ದಾರಂತೆ.
ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ, ಎಲ್ಲಿಯಾದರೂ ಅನಾಥಾಶ್ರಮಕ್ಕೆ ಸೇರಿಸಿ ಎಂದಿದ್ದಾರಂತೆ. ಇಷ್ಟು ವರ್ಷ ಮಕ್ಕಳಿಗೆ ಆಸರೆಯಾಗಿದ್ದ ತಾಯಿಗೆ ಇದೀಗ ಮಕ್ಕಳು ಆಸರೆಯಾಗದ ಸ್ಥಿತಿ ನಿರ್ಮಾಣವಾಗಿದೆ.
ಕುಮಟಾದ ಜಾನಕಿರಾಮ ವೃದ್ಧಾಶ್ರಮಕ್ಕೆ ಸೇರಿಸಲು ನಿರ್ಧಾರ
ಈರವ್ವ ಲಿವರ್ ಸಂಪೂರ್ಣ ಹಾನಿಯಾಗಿರುವುದರಿಂದ ಆರೋಗ್ಯ ಸುಧಾರಿಸುವುದು ಕಷ್ಟ ಎಂದು ವೈದ್ಯರು ಹೇಳಿದ್ದಾರಂತೆ. ಆದರೆ ಚೆನ್ನಾಗಿ ನೋಡಿಕೊಂಡರೆ ಇನ್ನೂ ಆರು ತಿಂಗಳು ಅಥವಾ ಒಂದು ವರ್ಷ ಬದುಕಬಹುದೆಂಬುದು ವೈದ್ಯರ ನುಡಿ. ಆದರೇ ಹೆತ್ತ ಮಕ್ಕಳ್ಯಾರೂ ತಾಯಿಯನ್ನ ನೋಡಿಕೊಳ್ಳಲು ಸಿದ್ದರಿಲ್ಲ .ಹೀಗಾಗಿ ಈರವ್ವ ಅವರನ್ನು ಕುಮಟಾದ ಜಾನಕಿರಾಮ ವೃದ್ಧಾಶ್ರಮಕ್ಕೆ ಸೇರಿಸಲು ನಿರ್ಧರಿಸಲಾಗಿದೆ.
ಸಧ್ಯ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿರು ಈ ತಾಯಿ ಗೆ ಅಲ್ಲಿನ ಸಿಬ್ಬಂದಿಗಳೇ ಎಲ್ಲಾ ಎನ್ನುವಂತಾಗಿದೆ. ಐದು ಮಕ್ಕಳನ್ನು ಹೆತ್ತು ಅವರ ಬದುಕಿಗೆ ದಾರಿ ತೋರಿಸಿದ ತಾಯಿಗೆ ಕೊನೆಗಾಲದಲ್ಲಿ ತನ್ನ ಮಕ್ಕಳ ಆಸರೆ ಸಿಗದೆ ವೃದ್ಧಾಶ್ರಮದ ದಾರಿ ಹಿಡಿಯಬೇಕಾದ ಪರಿಸ್ಥಿತಿ ಬಂದಿರುವುದು ಮಾತ್ರ ದುರಂತ.
