ಶಿರಸಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಸಹೋದರನ ಮನೆಯನ್ನೇ ಜೆಸಿಬಿ ಬಳಸಿ ಧ್ವಂಸ ಮಾಡಲಾಗಿದೆ ಎಂಬ ಆರೋಪ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇಳಿಬಂದಿದೆ.
ಶಿರಸಿ (sirsi) ನಗರದ ವಿದ್ಯಾಧಿರಾಜ ಕಲಾಕ್ಷೇತ್ರದ ಬಳಿ ಘಟನೆ ನಡೆದಿದ್ದು, ಇಂದು ಮುಂಜಾನೆ ಜೆಸಿಬಿ ಬಳಸಿ ಸುಮಾರು 50 ವರ್ಷ ಹಳೆಯ ಮನೆಯನ್ನು ಧ್ವಂಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮೃತ ಪ್ರಭಾಕರ ನಾಯ್ಕ ಹಾಗೂ ಅವರ ಪತ್ನಿ ಮಂಗಳ ನಾಯ್ಕ ಅವರಿಗೆ ಸಂಬಂಧಿಸಿದ ಮನೆ ಇದಾಗಿದ್ದು, ಮನೆ ಧ್ವಂಸದಿಂದಾಗಿ ರಿಪೇರಿ ಕಾರ್ಯಕ್ಕಾಗಿ ತರಿಸಲಾಗಿದ್ದ ಸಿಮೆಂಟ್ ಶೀಟ್, ವಾಟರ್ ಟ್ಯಾಂಕ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಕಟ್ಟಡ ನಿರ್ಮಾಣಕ್ಕೆ ಬಳಸಲು ಸಂಗ್ರಹಿಸಿದ್ದ ಸಾಮಗ್ರಿಗಳು ನಾಶವಾಗಿವೆ ಎಂದು ಮಂಗಳ ನಾಯ್ಕ ಆರೋಪಿಸಿದ್ದಾರೆ.

ಪ್ರಭಾಕರ ನಾಯ್ಕ ಅವರು ವಾಸಿಸುತ್ತಿದ್ದ ಈ ಮನೆ ಅರಣ್ಯ ಒತ್ತುವರಿ ಪ್ರದೇಶದಲ್ಲಿದೆ ಎಂದು ತಿಳಿದುಬಂದಿದೆ. ಪ್ರಭಾಕರ ನಾಯ್ಕ ಅವರ ನಿಧನದ ಬಳಿಕ ಪತ್ನಿ ಮಂಗಳ ನಾಯ್ಕ ಅವರು ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ನಡುವೆ, ಮನೆಯಲ್ಲಿ ತಮಗೂ ಪಾಲು ಬೇಕೆಂದು ಮೃತ ಪ್ರಭಾಕರ ನಾಯ್ಕ ಅವರ ಸಹೋದರರಾದ ಉದಯ ನಾಯ್ಕ ಹಾಗೂ ಜನಾರ್ದನ ನಾಯ್ಕ ಅವರ ಕುಟುಂಬದವರು ಆಸ್ತಿ ವಿವಾದ ಆರಂಭಿಸಿದ್ದಾರೆ ಎಂದು ಮಂಗಳ ನಾಯ್ಕ ಆರೋಪಿಸಿದ್ದಾರೆ.

“ವಿದ್ಯುತ್ ಬಿಲ್ ಹಾಗೂ ಕಂದಾಯವನ್ನು ನಾನೇ ಪಾವತಿಸುತ್ತಿದ್ದೇನೆ. ಮನೆಯನ್ನು ಸಹ ರಿಪೇರಿ ಮಾಡಿಸುತ್ತಿದ್ದೆ. ಆದರೆ, ಇದೇ ವಿಚಾರವಾಗಿ ವ್ಯಾಜ್ಯ ತೆಗೆದ ಉದಯ ನಾಯ್ಕ ಹಾಗೂ ಜನಾರ್ದನ ನಾಯ್ಕ ಅವರ ಕುಟುಂಬದವರು ಬೆಳಗಿನ ಜಾವ ಜೆಸಿಬಿ ತಂದು ಮನೆಯನ್ನು ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ” ಎಂದು ಮಂಗಳ ನಾಯ್ಕ ದೂರಿನಲ್ಲಿ ಆರೋಪಿಸಿದ್ದಾರೆ.ಇದನ್ನೂ ಓದಿ:-Sirsi | ಅಕ್ರಮ ಶ್ರೀಗಂಧ ಕೆತ್ತನೆ ಪ್ರಕರಣ; 20.5 ಕೆಜಿ ಶ್ರೀಗಂಧ ವಶ, ಓರ್ವ ಆರೋಪಿ ಬಂಧನ
ಘಟನೆಗೆ ಸಂಬಂಧಿಸಿದಂತೆ ಮಂಗಳ ನಾಯ್ಕ ಅವರು ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ.
