
ದಾಂಡೇಲಿ(Dandeli) ನಗರದ ಅಂಬೇವಾಡಿಯ ಆಶ್ರಯ ಮನೆಗಳ ಜನವಸತಿ ಪ್ರದೇಶದಲ್ಲಿ ರಾತ್ರಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿ ಮೂಡಿಸಿದೆ.
ಆಶ್ರಯ ಮನೆಗಳ ಸುತ್ತಮುತ್ತ ಗಿಡ-ಗಂಟಿಗಳು ದಟ್ಟವಾಗಿ ಬೆಳೆದಿದ್ದು, ಅಲ್ಲಲ್ಲಿ ಕೊಳಚೆ ಗುಂಡಿಗಳು, ತ್ಯಾಜ್ಯದ ರಾಶಿ ಹಾಗೂ ಮಳೆ ನೀರು ನಿಂತಿರುವುದು ಮೊಸಳೆ ಜನವಸತಿ ಪ್ರದೇಶದತ್ತ ಬರಲು ಕಾರಣವಾಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ನಿವಾಸಿಗಳು ಹೊರಗೆ ಓಡಾಡಲು ಭಯಪಡುವಂತಾಗಿದೆ. ಮೊಸಳೆಯನ್ನು ಕಂಡ ಸ್ಥಳೀಯರು ಬೊಬ್ಬೆ ಹಾಕಿ ಓಡಿಸಲು ಯತ್ನಿಸಿದಾಗ ಅದು ಪಕ್ಕದ ಪೊದೆಗಳೊಳಗೆ ನುಗ್ಗಿ ಮರೆಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:-Dandeli| ಹೋಂ ಸ್ಟೇ ಆವರಣದಲ್ಲೇ ಚಿರತೆ ಪ್ರತ್ಯಕ್ಷ ವಿಡಿಯೋ ನೋಡಿ.
ಇದು ಅಂಬೇವಾಡಿ ಪ್ರದೇಶದಲ್ಲಿ ಮೊಸಳೆ ಕಾಣಿಸಿಕೊಂಡಿರುವ ಮೊದಲ ಪ್ರಕರಣವಲ್ಲ. ಸುಮಾರು ಎರಡು ವರ್ಷಗಳ ಹಿಂದೆ ಉದ್ಯಮಿ ಅರುಣಾದ್ರಿ ರಾವ್ ಅವರ ಮನೆಯ ಬಾಗಿಲ ಬಳಿಯೂ ಮೊಸಳೆ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಾಳಿ ನದಿ ಭಾಗದಲ್ಲಿ ಈ ಹಿಂದೆ ಮೊಸಳೆ ದಾಳಿಗೆ ಐವರು ಬಲಿಯಾಗಿರುವ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ನಗರ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಸ್ವಚ್ಛತೆ ಮತ್ತು ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ.
ಜನವಸತಿ ಪ್ರದೇಶದ ಸುತ್ತಮುತ್ತ ದಟ್ಟವಾಗಿ ಬೆಳೆದಿರುವ ಗಿಡ-ಗಂಟಿಗಳು ಹಾಗೂ ಪೊದೆಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದರಿಂದ ಹಾವು, ಮೊಸಳೆಯಂತಹ ಜೀವಿಗಳು ಅಡಗಿಕೊಳ್ಳುವ ಸಾಧ್ಯತೆ ಕಡಿಮೆಯಾಗಲಿದೆ. ಇದನ್ನೂ ಓದಿ:-Dandeli | ಕುರಿ ನುಂಗಲು ಸುತ್ತಿಕೊಂಡ 15 ಅಡಿ ಉದ್ದದ ಬೃಹತ್ ಹೆಬ್ಬಾವು | Video News
ಮನೆಗಳ ಸುತ್ತಮುತ್ತ ಇರುವ ಕೊಳಚೆ ಗುಂಡಿಗಳನ್ನು ಮಣ್ಣು ಹಾಕಿ ಸಮತಟ್ಟು ಮಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಬೇಕು. ತ್ಯಾಜ್ಯದ ಕಾರಣ ಇಲಿ ಹಾಗೂ ಕಪ್ಪೆಗಳಂತಹ ಜೀವಿಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಅವುಗಳನ್ನು ಆಹಾರವಾಗಿ ಹುಡುಕಿಕೊಂಡು ಮೊಸಳೆಗಳು ಜನವಸತಿ ಪ್ರದೇಶದತ್ತ ಬರುವ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿದ್ದಾರೆ.
ಮಳೆ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದೆ. ಸಂಜೆಯ ನಂತರ ಮಕ್ಕಳನ್ನು ಹಾಗೂ ಸಾಕು ಪ್ರಾಣಿಗಳನ್ನು ಹೊರಗೆ ಬಿಡದಂತೆ ಎಚ್ಚರಿಕೆ ವಹಿಸಬೇಕು. ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಿ ರಾತ್ರಿ ವೇಳೆ ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಡಬೇಕಾಗಿದೆ.
ಸಧ್ಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು,ಸ್ಥಳೀಯರ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪೊದೆಗಳಲ್ಲಿ ಅಡಗಿರುವ ಮೊಸಳೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
