Sirsi : ಫ್ರೀಬಸ್ ಬಳಕೆ ಪ್ರಯಾಣಿಕರೇ ಟಾರ್ಗೆಟ್ 9 ಲಕ್ಷ ವೌಲ್ಯದ ಚಿನ್ನಾಭರಣ ದೋಚಿದ ಆಂತರ್ ಜಿಲ್ಲಾ ಕಳ್ಳಿಯ ಬಂಧನ
Sirsi news:- ಮಹಿಳೆಯರಿಗೆ ಉಪಯೋಗವಾಗಲಿ ಎಂದು ರಾಜ್ಯ ಸರ್ಕಾರ ಉಚಿತ ಬಸ್ ಗಳ ವ್ಯವಸ್ತೆ ಮಾಡಿದೆ. ಆದರೇ ಇದನ್ನೇ ಬಂಡವಾಳ ಮಾಡಿಕೊಂಡ ಬೆಂಗಳೂರು ಮೂಲದ ಗ್ಯಾಂಗ್ ಒಂದು ಪ್ರಯಾಣಿಕರ ಚಿನ್ನಾಭರಣ ಹಣ ದೋಚಿ ಇದೀಗ ಶಿರಸಿ (sirsi)ಪೊಲೀಸರ ಅಥಿತಿಯಾಗಿದ್ದಾರೆ.
ಮುಖ್ಯ ಆರೋಪಿ ಮಹಿಳೆಯಾಗಿದ್ದು ಬೆಂಗಳೂರಿನಿಂದ ವಾಹನದಲ್ಲಿ ತನ್ನ ತಂಡದೊಂದಿಗೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ರಷ್ ಇರುವ ಬಸ್ ಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದರು.
ಶಿರಸಿಯಲ್ಲಿ ಮಾಡಿದ್ದೇನು?

ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಯನ್ನು ಪತ್ತೆಹಚ್ಚಿ ಶಿರಸಿ ನಗರ ಪೊಲೀಸರು ಬಂಧಿಸಿದ್ದು, ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳನ್ನು ಭೇದಿಸಿ ₹9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:-Sirsi| ಸ್ನೇಹಿತನ ಹತ್ತು ವರ್ಷದ ಬಾಲಕಿಗೆ ನಿರಂತರ ಲೈಂಗಿಕ ದೌರ್ಜನ್ಯ- ಆರೋಪಿ ಬಂಧನ
ಜೂನ್ 3, 2026ರಂದು ಮಧ್ಯಾಹ್ನ ಸೊರಬ ತಾಲೂಕಿನ ಕಲಗೋಡ ಗ್ರಾಮದ ನಿವಾಸಿ ಸವಿತಾ ಆನಂದ ನಾಯ್ಕ್ ಅವರು ಯಲ್ಲಾಪುರದ ಅಡಿಕೆಸರ ಗ್ರಾಮದಿಂದ ತಮ್ಮ ಊರಾದ ಚಂದ್ರಗುತ್ತಿಗೆ ತೆರಳಲು ಶಿರಸಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ತಮ್ಮ ಅಕ್ಕ ನಾಗರತ್ನ ಅವರನ್ನು ಶಿರಸಿ–ಬನವಾಸಿ ಬಸ್ಗೆ ಹತ್ತಿಸಲು ಹೋಗಿದ್ದಾಗ, ಜನಜಂಗುಳಿಯನ್ನು ದುರುಪಯೋಗಪಡಿಸಿಕೊಂಡು ಆರೋಪಿತೆ ಅವರ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆಯುವ ಮೂಲಕ ಸ್ಟೀಲ್ ಬಾಕ್ಸ್ನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ (ಅಂದಾಜು ₹1 ಲಕ್ಷ), 10 ಗ್ರಾಂ ತೂಕದ ಚಿನ್ನದ ಕಿವಿಯ ಬೆಂಡೋಲೆ, ಸರಪಳಿ ಹಾಗೂ ಮಾಟಿ (ಅಂದಾಜು ₹50 ಸಾವಿರ), ಏರ್ಟೆಲ್ ಕೀಪ್ಯಾಡ್ ಮೊಬೈಲ್ (₹1 ಸಾವಿರ) ಹಾಗೂ ₹8 ಸಾವಿರ ನಗದು ಸೇರಿ ಒಟ್ಟು ₹1.59 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಳು.
ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್) ಅವರ ನಿರ್ದೇಶನದಂತೆ ವಿಶೇಷ ತನಿಖಾ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಯಿತು. ತನಿಖೆಯ ವೇಳೆ ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಜೂನ್ 25, 2026 ರಂದು ಬೆಂಗಳೂರಿನ ರಾಜಾಜಿನಗರದ 5ನೇ ಬ್ಲಾಕ್, ಸರ್ಕಾರಿ ಆಸ್ಪತ್ರೆ ಹಿಂಭಾಗದ ನಿವಾಸಿ ಜ್ಯೋತಿ @ ಸಂಜನಾ (32) ಅವರನ್ನು ಬಂಧಿಸಲಾಯಿತು.
ವಿಚಾರಣೆ ವೇಳೆ ಆರೋಪಿತೆ, 2025ರ ಸೆಪ್ಟೆಂಬರ್ 24ರಂದು ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲೇ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲೂ ತಾನೇ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದರ ಆಧಾರದಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಇ.ಸಿ. ಅವರ ಮಾರ್ಗದರ್ಶನದಲ್ಲಿ ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ನರಸಿಂಹಲು ಟಿ. ಹಾಗೂ ತನಿಖಾ ಪಿಎಸ್ಐ ನಾರಾಯಣ ರಾಥೋಡ್ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ಚನ್ನಬಸಪ್ಪ ಕೆ., ರಾಜು ಎಂ., ಸುನೀಲ್, ಪ್ರಶಾಂತ, ಶಂಕರಮ್ಮ, ದೀಪಾ ಹಾಗೂ ಕಾರವಾರ ತಾಂತ್ರಿಕ ವಿಭಾಗದ ಉದಯ ಗುನಗಾ ಮತ್ತು ಬಬನ್ ಕದಂ ಅವರು ಯಶಸ್ವಿಯಾಗಿ ನಡೆಸಿದರು.
ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಆರೋಪಿಯನ್ನು ಬಂಧಿಸಿ ಕಳುವಾದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ತಂಡದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.
